ರಾಮನಗರ: ಸಮಾಜದಿಂದ ಹೊರಗುಳಿದಿರುವ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ನೆರವಾಗಿದ್ದು, ಅವರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯದಲ್ಲಿ ರಾಮನಗರ ಜಿ.ಪಂ. ವಿಶಿಷ್ಟ ಹೆಜ್ಜೆ ಇರಿಸಿದೆ.
ಲಿಂಗತ್ವ ಅಲ್ಪಸಂಖ್ಯಾತರು ತಮ್ಮದೇ ಆದ ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು, ಸಾಮಾನ್ಯರೊಂದಿಗೆ ಬೆರೆತು ದುಡಿವ ಪರಿಪಾಠ ಕಡಿಮೆ. ಅವರಲ್ಲೂ ದುಡಿಯುವ ಇಚ್ಛಾಶಕ್ತಿ ಇರುತ್ತದೆ. ಅದನ್ನು ಗುರುತಿಸಿ ಅವರನ್ನೂ ಆರ್ಥಿಕವಾಗಿ ಸಬಲಗೊಳಿಸಲು ನರೇಗಾದಡಿ ಅವಕಾಶವಿದೆ.
ರಾಮನಗರ ಜಿಲ್ಲಾ ಪಂಚಾಯಿತಿಯು ತೃತೀಯ ಲಿಂಗಿಗಳನ್ನು ಗುರುತಿಸಿ ಅವರಿಗೆ ವಿಶೇಷ ಜಾಬ್ ಕಾರ್ಡ್ ನೀಡುವ ವ್ಯವಸ್ಥೆ ತಂದಿದೆ. ಇದರ ಅನ್ವಯ ಚನ್ನಪಟ್ಟಣ ತಾಲ್ಲೂಕಿನ 9 ಜನರಿಗೆ ಉದ್ಯೋಗ ಚೀಟಿ ನೀಡಲಾಗಿದೆ. ಇಬ್ಬರು ಪೌಷ್ಟಿಕ ಕೈತೋಟ ಫಲಾನುಭವಿಗಳು, ಒಬ್ಬರು ದನದ ಕೊಟ್ಟಿಗೆ ಫಲಾನುಭವಿಗಳಾಗಿ ಗೌರ
ವಯುತ ಬದುಕು ಸಾಗಿಸಿ ಲಿಂಗತ್ವ ಅಲ್ಪ
ಸಂಖ್ಯಾತರಿಗೆ ಮಾದರಿಯಾಗಿದ್ದಾರೆ. ಈ ಯೋಜನೆಯಲ್ಲಿ ಭಾಗಿಯಾಗುವುದರಿಂದ ಒಬ್ಬರಿಗೆ 100 ದಿನಗಳ ಕೂಲಿ ಕೆಲಸದಿಂದ ₹30,900 ಕೂಲಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಜಾಬ್ ಕಾರ್ಡ್ ಪಡೆದು ನರೇಗಾ ಕಾಮಗಾರಿಗಳ ಕೆಲಸದ ಸ್ಥಳದಲ್ಲಿ ಯಾವುದೇ ಬೇಧ-ಭಾವವಿಲ್ಲದೆ, ಸಮಾನ ಕೆಲಸಕ್ಕೆ ಸಮಾನ ಕೂಲಿ ಪಡೆದು, ಫಲಾನುಭವಿಗಳಾಗಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಿದೆ.
‘ಲಿಂಗ ತಾರತಮ್ಯ ಶೋಷಣೆ ಹಾಗೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಈ ವರ್ಗದವರು ಅಲ್ಲಲ್ಲಿ ಭಿಕ್ಷಾಟನೆ ಮಾಡಿ ಬದುಕುತ್ತಿರುವುದೇ ಹೆಚ್ಚು. ಅಂತಹವರ ಬದುಕಿಗೆ ನರೇಗಾ ಹೊಸ ತಿರುವು ನೀಡಿದೆ. ಕೆಲಸದ ಜೊತೆಗೆ ಏಕರೀತಿ ಕೂಲಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ’ ಎನ್ನುತ್ತಾರೆ ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ.
ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಬಗ್ಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಐಇಸಿ ಸಿಬ್ಬಂದಿ ಮಾಹಿತಿ ನೀಡಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.