ಕನಕಪುರ: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವನಪ್ಪಿರುವ ಘಟನೆ ತಿಮ್ಮಸಂದ್ರ ಬಳಿ ಭಾನುವಾರ ರಾತ್ರಿ ನಡೆದಿದೆ.
ಕನಕಪುರದ ಬೈಕ್ ಮೆಕ್ಯಾನಿಕ್ ನಯಾಜ್ ಪಾಷಾ (42) ಮತ್ತು ಆತನ ಸ್ನೇಹಿತ ಫೈರೋಜ್(38) ಮೃತರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ವಿವೇಕಾನಂದ ನಗರದ ಗಿರೀಶ್ (25) ಮತ್ತು ರಮೇಶ್ (17) ಗಾಯಗೊಂಡಿದ್ದು, ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಯಾಜ್ ಪಾಷಾ ಮತ್ತು ಫೈರೋಜ್ ರಾಮನಗರದಲ್ಲಿ ಬಾಬಯ್ಯನ ಕೊಂಡವನ್ನು ಮುಗಿಸಿಕೊಂಡು ಬೈಕ್ನಲ್ಲಿ ಭಾನುವಾರ ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಕನಕಪುರಕ್ಕೆ ಬರುತ್ತಿದ್ದರು. ಕಾರಿನಲ್ಲಿದ್ದವರು ರಾಮನಗರಕ್ಕೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗುತ್ತಿದ್ದು, ಅಳ್ಳಿಮಾರನಹಳ್ಳಿ ತಿಮ್ಮಸಂದ್ರ ಮಧ್ಯದಲ್ಲಿ ಬರುವ ಸೇತುವೆ ಮುಂಭಾಗ ಬೈಕ್ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾರು ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಕುಟುಂಬದವರು ಮುಂದಿನ ಕಾರ್ಯಗಳನ್ನು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.