
ಕನಕಪುರ ಉಪನೊಂದಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಪತ್ರ ಬರಹಗಾರರು ಪ್ರತಿಭಟನೆ ನಡೆಸಿದರು
ಕನಕಪುರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕನಕಪುರ ತಾಲ್ಲೂಕು ಪತ್ರ ಬರಹಗಾರರ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಉಪನೋಂದಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಪತ್ರ ಬರಹಗಾರರು ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಕೆ.ಎಸ್.ಮುರಳಿಧರ್, ಉಪಾಧ್ಯಕ್ಷ ಟಿ.ಗೋಪಿ ಮಾತನಾಡಿ, ‘ಸರ್ಕಾರವು ಹೊಸದಾಗಿ ತರಲು ಹೊರಟಿರುವ ಕಾವೇರಿ 2.0 ಮತ್ತು 3.0 ತಂತ್ರಾಂಶದಿಂದ ಪತ್ರ ಬರಹಗಾರರ ಭವಿಷ್ಯ ನಾಶವಾಗಲಿದೆ. ಇದನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿ ಪಾಲಾಗಲಿವೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಪತ್ರ ಬರಹಗಾರರಿದ್ದು, ಕಚೇರಿಯಲ್ಲಿ ಸಹಾಯಕರು ಸಿಬ್ಬಂದಿ ಸೇರಿದಂತೆ ಒಂದು ಲಕ್ಷದಷ್ಟು ಜನರು ಇದನ್ನೇ ಆಶ್ರಯಿಸಿದ್ದಾರೆ. ಸರ್ಕಾರದ ಹೊಸ ನಿಯಮದಿಂದ ಇವರೆಲ್ಲರೂ ನಿರುದ್ಯೋಗಿಗಳಾಗಲಿದ್ದಾರೆ’ ಎಂದು ದೂರಿದರು.
‘ಸರ್ಕಾರದಲ್ಲಿ ಈಗಾಗಲೇ ಮೂರು ಲಕ್ಷದಷ್ಟು ಉದ್ಯೋಗ ಖಾಲಿ ಇವೆ. ಮುದ್ರಾಂಕ ಇಲಾಖೆಯ ಹೊಸ ಯೋಜನೆಗಳಿಂದ ಒಂದು ಲಕ್ಷದಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ. ಸರ್ಕಾರ ಹೊಸ ಉದ್ಯೋಗ ಸೃಷ್ಟಿ ಮಾಡದಿದ್ದರು ಇರುವವರನ್ನು ನಿರುದ್ಯೋಗಿಗಳಾಗಿ ಮಾಡಬಾರದು’ ಎಂದು ಒತ್ತಾಯಿಸಿದರು.
‘ರಾಜ್ಯದಾದ್ಯಂತ ಪತ್ರ ಬರಹಗಾರರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದು, ಡಿಸೆಂಬರ್ 16ರ ಮಂಗಳವಾರ ಬೆಳಗಾವಿ ಚಲೊ ನಡೆಸಲಾಗುತ್ತಿದೆ. ಸರ್ಕಾರ ಮನವಿ ಪುರಸ್ಕರಿಸದೆ, ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು’ ಎಂದರು.
ಕನಕಪುರ ತಾಲ್ಲೂಕಿನ ಪತ್ರ ಬರಹಗಾರರು ಪಾಲ್ಗೊಂಡಿದ್ದರು. ಮನವಿಯನ್ನು ಉಪನೋಂದಣಾಧಿಕಾರಿ ಸುರೇಶ್ ಮತ್ತು ಅನಿತಾ ಅವರಿಗೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.