ADVERTISEMENT

ಕನ್ನಡ ಪುಸ್ತಕಕ್ಕೆ ಪ್ರೋತ್ಸಾಹ ನೀಡದ ಸರ್ಕಾರ: ಪ್ರೊ. ಹಿ.ಚಿ. ಬೋರಲಿಂಗಯ್ಯ ಬೇಸರ

ಕರ್ನಾಟಕ‌ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಬೇಸರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 3:03 IST
Last Updated 24 ಆಗಸ್ಟ್ 2025, 3:03 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ, ಜಿಲ್ಲೆಯ 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೂರು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಪುಸ್ತಕ ವಿತರಿಸಲಾಯಿತು. </p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ, ಜಿಲ್ಲೆಯ 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೂರು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಪುಸ್ತಕ ವಿತರಿಸಲಾಯಿತು.

   

ರಾಮನಗರ: ‘ಕನ್ನಡ ಭಾಷೆಯ ಪುಸ್ತಕಗಳಿಗೆ ಸರ್ಕಾರಗಳು ಪ್ರೋತ್ಸಾಹ ನೀಡುವಲ್ಲಿ ಸೋತಿವೆ. ಕನ್ನಡದ ಬಗೆಗಿನ ಈ ನಿರ್ಲಕ್ಷ್ಯದ ಧೋರಣೆ ನಿರಂತರವಾಗಿದೆ. ಗ್ರಂಥಾಲಯಗಳಿಗೆ ಆಯ್ಕೆಯಾದ ಕನ್ನಡ ಪುಸ್ತಕಗಳಿಗೆ ಕೊಡಬೇಕಾದ ಹಣವನ್ನು ಸಹ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಹೀಗಾದರೆ, ಸಾಹಿತ್ಯ ಮತ್ತು ಸಂಸ್ಕೃತಿ ಹೇಗೆ ಉಳಿಯುತ್ತದೆ’ ಎಂದು ಕರ್ನಾಟಕ‌ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ, ಜಿಲ್ಲೆಯ 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೂರು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಮಕ್ಕಳಿಗೆ ಕನ್ನಡದ ಜ್ಞಾನ ಕೊಡುವ ಕೆಲಸ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಶಿಕ್ಷಕರು ನೀಡಬೇಕಿದೆ. ಕನ್ನಡ ಭಾಷಾ ಪ್ರಬುದ್ದತೆ ಇದ್ದರೆ ಉತ್ತಮ ಪುಸ್ತಕಗಳನ್ನು ಬರೆಯಲು ನೆರವಾಗಲಿದೆ. ಹಾಗಾಗಿ, ಮಕ್ಕಳಲ್ಲಿ ಕನ್ನಡ ಪುಸ್ತಕನು ಓದುವ, ಖರೀದಿಸುವ, ವಿತರಿಸುವ ಜ್ಞಾನ ಹಂಚಬೇಕಿದೆ. ಆ ಕಾರ್ಯದಲ್ಲಿ ಬರಹಗಾರರು ಮತ್ತು ಪ್ರಕಾಶಕರ ಸಂಘ ಪುಸ್ತಕ ವಿತರಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ‘ರಾಜ್ಯದಲ್ಲಿ ಹಲವು ಟ್ರಸ್ಟ್‌ಗಳಿವೆ. ಆದರೆ, ಜನಪರ ಕಾರ್ಯಕ್ರಮ ಆಯೋಜಿಸುವಲ್ಲಿ ಕೆಲವು ಟ್ರಸ್ಟ್‌ಗಳು ಸೋತಿವೆ. ಶಿಕ್ಷಕರು ಮನಸ್ಸು ಮಾಡಿದರೆ ಶಾಲೆಯ ಕೊರತೆಗಳನ್ನು ತುಂಬಿಸಿಕೊಂಡು ಜ್ಞಾನವಂತ ಮಕ್ಕಳನ್ನು ಸಮಾಜಕ್ಕೆ ಕೊಡುವ ಕೆಲಸ ಮಾಡಬಲ್ಲರು’ ಎಂದರು.

‘ಇತ್ತೀಚೆಗೆ ಮೊಬೈಲ್‌ಗೆ ಮಕ್ಕಳು ಅಂಟಿಕೊಂಡಿರುವ ಬಗ್ಗೆ ತಜ್ಞರು ಅಧ್ಯಯನ ನಡೆಸಿ ಮುಂದಿನ‌ ಅಪಾಯಗಳ ಬಗ್ಗೆ ತಿಳಿಸಿದ್ದಾರೆ. ಪುಸ್ತಕಗಳನ್ನು ಓದುವ ರುಚಿ‌ ಕಂಡರೆ ಮೊಬೈಲ್‌ನಿಂದ ಮಕ್ಕಳು ದೂರವಾಗಲಿದ್ದಾರೆ. ಸಮಾಜಕ್ಕೆ ಉಪಯುಕ್ತವಾದ ಹಾಗೂ ಮಕ್ಕಳು ಬದುಕು ರೂಪಿಸಿಕೊಳ್ಳಲು ನೆರವಾಗುವ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ‘ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ನೂರು ಕನ್ನಡ ಪುಸ್ತಕ ವಿತರಣೆ ಮಾಡಿರುವುದು ಮಕ್ಕಳಲ್ಲಿ ಜ್ಞಾನದ ಸಂಪತ್ತನ್ನು ವೃದ್ದಿಸಲು ಸಹಕಾರಿಯಾಗಲಿವೆ. ಮಕ್ಕಳಿಗೆ ಸಾಮಾನ್ಯ ಜ್ಞಾನ, ದೇಶಭಕ್ತಿ, ನೀತಿಕಥೆಯಂತಹ ಹತ್ತು ಸಾವಿರ ಪಠ್ಯೇತರ ಪುಸ್ತಕಗಳನ್ನು ಜಿಲ್ಲೆಗೆ ವಿತರಣೆ ಮಾಡಿದ್ದು, ಬಹಳ ಉಪಯುಕ್ತ ಕಾರ್ಯಕ್ರಮವಾಗಿದೆ’ ಎಂದು ತಿಳಿಸಿದರು.

ಪುಸ್ತಕ ಆಯ್ಕೆ ಪ್ರಾಧಿಕಾರದ ಅಧ್ಯಕ್ಷ ಕರಿಗೌಡ ಬೀಚನಹಳ್ಳಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ದೊಡ್ಡೇಗೌಡ, ಜಿಲ್ಲಾ ಗ್ರಂಥಾಲಯ ಮುಖ್ಯಾಧಿಕಾರಿ ಚನ್ನಕೇಶವ, ಶಿಕ್ಷಕರಾದ ಶಿವಸ್ವಾಮಿ, ಶೈಲಜಾ, ಪದ್ಮರೇಖಾ, ರಾಜು ಹಾಗೂ ಇತರರು ಇದ್ದರು.

10 ಜಿಲ್ಲೆಯಲ್ಲಿ 1 ಲಕ್ಷ ಪುಸ್ತಕ ವಿತರಣೆ

‘2003ರಲ್ಲಿ ಪ್ರಾರಂಭಗೊಂಡ ಸಂಘವು ಬರಹಗಾರರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಮಕ್ಕಳು ಮತ್ತು ವಯಸ್ಕರಲ್ಲಿ ಓದುವ ಅಭಿರುಚಿ ಹೆಚ್ಚಿಸುವುದಕ್ಕಾಗಿ ರಾಜ್ಯದ 10 ಜಿಲ್ಲೆಗಳಲ್ಲಿ ವಿವಿಧ ಪ್ರಕಾರದ 1 ಲಕ್ಷ ಪಠ್ಯೇತರ ಮಕ್ಕಳ ಪುಸ್ತಕಗಳನ್ನು ವಿತರಣೆ ಮಾಡಿದೆ. ಜೊತೆಗೆ ಪ್ರತಿವರ್ಷ ಬರಗಾರರಿಗೆ ವಾರ್ಷಿಕ ಪ್ರಶಸ್ತಿ ನೀಡುತ್ತಾ ಬರವಣಿಗೆಯನ್ನು ಉತ್ತೇಜಿಸುತ್ತಿದೆ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘದ ನಿಡಶಾಲೆ ಪುಟ್ಟಸ್ವಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.