ADVERTISEMENT

ಕನಕಪುರ | ಕನ್ನಡದಲ್ಲಿ ಹೆಚ್ಚು ಅಂಕ: ಮುಸ್ಲಿಂ ಮಕ್ಕಳಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 4:54 IST
Last Updated 12 ಜನವರಿ 2026, 4:54 IST
ಕನಕಪುರದಲ್ಲಿ ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಪ್ರತಿಭಾ ಪುರಸ್ಕಾರ ಸ್ವೀಕರಿಸಿರುವ ವಿದ್ಯಾರ್ಥಿಗಳು 
ಕನಕಪುರದಲ್ಲಿ ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಪ್ರತಿಭಾ ಪುರಸ್ಕಾರ ಸ್ವೀಕರಿಸಿರುವ ವಿದ್ಯಾರ್ಥಿಗಳು    

ಕನಕಪುರ: ರಾಜ್ಯೋತ್ಸವ ಅಂಗವಾಗಿ ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಭಾನುವಾರ ನಗರದ ಮುಸ್ಲಿಂ ಬ್ಲಾಕ್‌ನ ಶಾದಿ ಮಹಲ್‌ನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಗೀತ ಗಾಯನ ಕಾರ್ಯಕ್ರಮ ಆಯೋಜಿಸಿತ್ತು. ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 30 ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವುದು ಸಮುದಾಯದ ಕನ್ನಡ ಭಾಷಾಭಿಮಾನದ ಪ್ರತೀಕ ಎಂದು ನಗರಸಭೆ ಉಪಾಧ್ಯಕ್ಷ ಸೈಯದ್ ಸಾಧಿಕ್ ಹೇಳಿದರು.

ಕನ್ನಡ ಎಂದರೆ ಕೇವಲ ಭಾಷೆಯಲ್ಲ. ಕನ್ನಡಿಗರ ಅಸ್ಮಿತೆ. ಕನ್ನಡ ನಾಡಿನಲ್ಲಿರುವ ಯಾವುದೇ ಧರ್ಮೀಯರಾಗಿದ್ದರೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ ಹೇಳಿದರು.

ADVERTISEMENT

ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಟ್ರಸ್ಟ್‌ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಈ ವರ್ಷ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿಾಗುತ್ತಿದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಜ್ಗರ್ ಖಾನ್ ಹೇಳಿದರು.  

ರಾಜ್ಯೋತ್ಸವ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ನಿವೃತ್ತ ಮುಖ್ಯ ಶಿಕ್ಷಕ ಯಾಕೂಬ್ ಪಾಷಾ ಉಪನ್ಯಾಸ ನೀಡಿದರು. ಕಬ್ಬಾಳೇಗೌಡ, ಚಿಕ್ಕೆಂಪೆಗೌಡ, ಗಬ್ಬಾಡಿ ಕಾಡೆಗೌಡ, ಉಪನ್ಯಾಸಕ ರಮೇಶ್ ಸಿ. ಹೊಸದೊಡ್ಡಿ, ಅಹಮದ್ ಪಾಷಾ, ಶಿವಲಿಂಗಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.