ಮಾಗಡಿ: ನಾಡಪ್ರಭು ಕೆಂಪೇಗೌಡರ ವಂಶಜರು ಹಾಗೂ ಮಾಗಡಿ ಸೀಮೆಗೂ ಇರುವ ನಂಟು ಅವಿನಾಭಾವ ವಾದದ್ದು. ಅದನ್ನು ನೆನಪಿಸುವಂತೆ ಇರುವ ಕುರುಹುಗಳಲ್ಲಿ ಹುಲಿಕಲ್ ದೊರೆಮನೆಯೂ ಒಂದು. ಕೆಂಪೇಗೌಡರ ವಂಶದ ಕುಡಿಗಳು ಇಂದು ಸಾಮಾನ್ಯರಂತೆ ಈ ದೊರೆಮನೆಯಲ್ಲಿ ವಾಸಿಸುತ್ತಿದ್ದಾರೆ.
ಮಾಗಡಿಯ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವು ಐತಿಹ್ಯಗಳ ದಾಖಲಾತಿ ಕಾರ್ಯ ನಡೆದಿದೆಯಾದರೂ ಈ ಹುಲಿಕಲ್ ಗ್ರಾಮದ ದೊರೆಮನೆಯ ಬಗ್ಗೆ ಮಾಹಿತಿ ಸಿಗುವುದು ಅಪರೂಪ. ಮೂರ್ನಾಲ್ಕು ಶತಮಾನ ಹಳೆಯತಾದ ಈ ಕಟ್ಟಡ ನಿರ್ಮಾಣದಲ್ಲಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬೃಹತ್ತಾದ ಪ್ರವೇಶ ದ್ವಾರ, ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡ ಬಾಗಿಲುಗಳು ಎಲ್ಲವೂ ಗಮನ ಸೆಳೆಯುತ್ತವೆ.
ಕೆಂಪೇಗೌಡರ ವಂಶಜರು ಬಳಸುತ್ತಿದ್ದ ರಾಜರ ಕತ್ತಿ, ಗುರಾಣಿ ಇತರೆ ಅಮೂಲ್ಯವಾದ ವಸ್ತುಗಳ ಸಂಗ್ರಹ ಇಲ್ಲಿದೆ. ಕೃಷ್ಣಪ್ಪ ನಾಯಕ, ಚಿಕ್ಕಪ್ಪಯ್ಯಗೌಡ, ಚಿಕ್ಕಪ್ಪ ಎಂಬ ಹೆಸರಿನೊಂದಿಗೆ ಇವರ ವಂಶಜರು ಮೊರಸು ಒಕ್ಕಲಿಗರ ಬೆರಳು ಕೊಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಮಿಳುನಾಡಿನ ಹೊಸೂರಿನವರೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದಾರೆ.
ಹುಲಿಕಲ್ ದೊರೆಮನೆಗೇ ಭೇಟಿ ನೀಡಿ ದಾಖಲೆ ಸಂಗ್ರಹಿಸಿರುವ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ, ತಮ್ಮ ಸಂಶೋಧನಾ ಪ್ರಬಂಧದಲ್ಲಿ ಮಾಹಿತಿ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಸಕಲ ಸಮುದಾಯದ ವರನ್ನು ತಮ್ಮ ಕರುಳ ಬಳ್ಳಿಗಳಂತೆ ಕಂಡಿದ್ದ ನಾಡಪ್ರಭುಗಳ ವಂಶದ ಕುಡಿಗಳನ್ನು ರಕ್ಷಿಸುವುದು ನಾಡ ಪ್ರೇಮಿಗಳ ಕರ್ತವ್ಯವಾಗಿದೆ. ಅನಾಥವಾಗಿರುವ ದೊರೆಮನೆಗೆ ಕಾಯಕಲ್ಪ ನೀಡಬೇಕಿದೆ ಎಂಬುದು ಇತಿಹಾಸ ಪ್ರೇಮಿಗಳ ಅನಿಸಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.