ಕನಕಪುರ: ‘ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಇನ್ನಿಲ್ಲದಂತೆ ಶ್ರಮ ಪಡುತ್ತಾರೆ. ಅಂತಹ ತಂದೆ ತಾಯಿಯರ ಕಣ್ಣಲ್ಲಿ ನೀರು ಹಾಕಿಸಬೇಡಿ’ ಎಂದು ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ನಾಗೇಂದ್ರ ಬಾಬು ಹೇಳಿದರು.
ಇಲ್ಲಿನ ರೂರಲ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ‘ರಿವರ್ಸ್ ಅಡಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೆತ್ತವರು ಮಕ್ಕಳ ಭವಿಷ್ಯಕ್ಕೆ ಚಡಪಡಿಸುವ ರೀತಿ, ಮಕ್ಕಳು ಅವರ ಪೋಷಣೆ, ಆರೈಕೆಗೆ ಮುಂದಾಗುವುದಿಲ್ಲ. ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯಂತಹ ಕಾರ್ಯಗಳಿಗೆ ತಂದೆ–ತಾಯಿ ಶಕ್ತಿಮೀರಿ ದುಡಿಯುತ್ತಾರೆ. ಮಕ್ಕಳೇ ಆಸ್ತಿ ಎಂದು ಭಾವಿಸಿ ಕನಸಿನ ಗೋಪುರವನ್ನೇ ಕಟ್ಟಿಕೊಂಡಿರುತ್ತಾರೆ. ಮುಪ್ಪಿನ ಕಾಲದಲ್ಲಿ ನೋಡಿಕೊಳ್ಳದೆ ಮನೆಯಿಂದ ಹೊರಗಟ್ಟುವುದು ದುರಂತ. ಹಾಗಾಗದೇ ಅವರಿಗೆ ನೆರವಾಗಬೇಕು’ ಎಂದು ಸಲಹೆ ನೀಡಿದರು.
‘ಮುಪ್ಪಿನ ಕಾಲದಲ್ಲಿ ಮಕ್ಕಳು ನೋಡಿಕೊಳ್ಳದಿದ್ದರೆ ಅಂತಹವರು ತಮ್ಮ ಆಸ್ತಿಯನ್ನು ಸ್ಥಳೀಯ ಬ್ಯಾಂಕ್ಗಳಲ್ಲಿ ಅಡಮಾನವಿಟ್ಟು, ಅದರಲ್ಲಿ ತಮ್ಮ ಜೀವನ ಸಾಗಿಸುವ ಕಾನೂನು 2007ರಿಂದ ಜಾರಿಯಾಗಿದೆ. ಅದನ್ನುಮುಂದೆ ಅವರ ಮಕ್ಕಳು ಬ್ಯಾಂಕಿಗೆ ಹಣ ಕಟ್ಟಿ ಬಿಡಿಸಿಕೊಳ್ಳಬಹುದು. ಇಲ್ಲವೇ ಸರ್ಕಾರವೇ ಹರಾಜು ಮಾಡಿ ಉಳಿದ ಹಣವನ್ನು ಸಂಬಂಧಪಟ್ಟವರಿಗೆ ಕೊಡುತ್ತದೆ’ ಎಂದು ‘ರಿವರ್ಸ್ ಅಡಮಾನ’ದ ಬಗ್ಗೆ ತಿಳಿಸಿಕೊಟ್ಟರು.
ಆರ್ಇಎಸ್ ಅಧ್ಯಕ್ಷ ಕೆ.ಬಿ.ನಾಗರಜು, ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ, ವಿಭಾಗದ ಮುಖ್ಯಸ್ಥ ತಮ್ಮಣ್ಣಗೌಡ, ಶಿಕ್ಷಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.