ADVERTISEMENT

ಮಡಿವಾಳ ಸಂಘಕ್ಕೆ ಭೂಮಿ ಮಂಜೂರು: ಬಿ.ಜಿ. ಶ್ರೀನಿವಾಸಪ್ರಸಾದ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 2:57 IST
Last Updated 2 ಫೆಬ್ರುವರಿ 2022, 2:57 IST
ಮಾಗಡಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಡೀಕಟ್ಟೆ, ಮಾಚಿದೇವ ಗುಡಿಯ ಸುತ್ತಲಿನ ನಿವೇಶನವನ್ನು ಸರ್ವೆ ಮಾಡಿಸುವಂತೆ ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌ ಅವರಿಗೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್‌, ಪುರಸಭೆ ಸದಸ್ಯರಾದ ನಾಗರತ್ನಮ್ಮ ರಾಜಣ್ಣ, ಎಂ.ಟಿ. ಶಿವಣ್ಣ, ಕಾರ್ಯದರ್ಶಿ ಶಿವಕುಮಾರ್‌ ಹಾಜರಿದ್ದರು
ಮಾಗಡಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಡೀಕಟ್ಟೆ, ಮಾಚಿದೇವ ಗುಡಿಯ ಸುತ್ತಲಿನ ನಿವೇಶನವನ್ನು ಸರ್ವೆ ಮಾಡಿಸುವಂತೆ ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌ ಅವರಿಗೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್‌, ಪುರಸಭೆ ಸದಸ್ಯರಾದ ನಾಗರತ್ನಮ್ಮ ರಾಜಣ್ಣ, ಎಂ.ಟಿ. ಶಿವಣ್ಣ, ಕಾರ್ಯದರ್ಶಿ ಶಿವಕುಮಾರ್‌ ಹಾಜರಿದ್ದರು   

ಮಾಗಡಿ: ‘ಪಟ್ಟಣದ ಗೌರಮ್ಮನ ಕೆರೆಯ ಉತ್ತರದಲ್ಲಿರುವ ಮಾಚಿದೇವ ಮಡಿವಾಳರ ಪುರಾತನ ಗುಡಿ, ಮಡಿವಾಳರ ಮಡೀಕಟ್ಟೆ ಹಾಗೂ ಕಲ್ಲಿನ ಮಂಟಪದ ಸುತ್ತಲಿನ ಭೂಮಿಯನ್ನು ಸರ್ವೆ ಮಾಡಿಸಿ ಸಂಘಕ್ಕೆ ಮಂಜೂರು ಮಾಡಿಕೊಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಹಶೀಲ್ದಾರ್ ಬಿ.ಜಿ. ಶ್ರೀನಿವಾಸಪ್ರಸಾದ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದಿಂದ ಮಂಗಳವಾರ ನಡೆದ ಮಡಿವಾಳಮಾಚಿದೇವರ ಜಯಂತಿಯಲ್ಲಿ ಅವರು ಮಾತನಾಡಿದರು.

ಶ್ರೇಷ್ಠ ವಚನಕಾರರಾದ ಮಾಚಿದೇವ ಮಡಿವಾಳ ವಚನ ಸಾಹಿತ್ಯ ರಕ್ಷಣೆಯ ಮಹಾ ದಂಡನಾಯಕರಾಗಿದ್ದರು. ಕಾಯಕವೇ ಭಕ್ತಿ, ಜೀವನದ ಉಸಿರು ಎಂದು ನಂಬಿದ್ದರು. ಅವರ ವಚನಗಳನ್ನು ಓದುವ ಮೂಲಕ ನಾವೆಲ್ಲರೂ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಪುರಸಭೆ ಸದಸ್ಯೆ ನಾಗರತ್ನಮ್ಮ ರಾಜಣ್ಣ ಮಾತನಾಡಿ, ತೀರಾ ಹಿಂದುಳಿದಿರುವ ಮಡಿವಾಳ ಸಮುದಾಯದವರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ನಾಮನಿರ್ದೇಶನ ಸದಸ್ಯ ಎಂ.ಟಿ. ಶಿವಣ್ಣ ಮಾತನಾಡಿ, ಸರ್ಕಾರ ತೀರಾ ಹಿಂದುಳಿದಿರುವ ಮಡಿವಾಳ ಸಮುದಾಯಕ್ಕೆ ವಿಶೇಷ ಸವಲತ್ತು ನೀಡಿ ಮುಖ್ಯವಾಹಿನಿಗೆ ತರಬೇಕು ಎಂದರು.

ಸಂಘದ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್ ಮಾತನಾಡಿ, 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲುಕೀಳು, ಅಸ್ಪೃಶ್ಯತೆ, ಮೌಢ್ಯತೆ ಜಾಸ್ತಿಯಾಗಿತ್ತು. ಬಸವಣ್ಣ ಅವರ ಸಂಗಾತಿಯಾಗಿದ್ದ ಮಾಚಿದೇವರು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾಪುರುಷ ಎಂದು ಬಣ್ಣಿಸಿದರು.

ಅಂಧಕಾರ ಅಳಿಸಿ, ಜ್ಞಾನಜ್ಯೋತಿ ಬೆಳಗಿಸಿದರು. ಮಡಿವಾಳರ ಮಡೀಕಟ್ಟೆಯಲ್ಲಿ ಪುರಾತನ ಕಾಲದಿಂದಲೂ ಬಟ್ಟೆಯನ್ನು ಮಡಿ ಮಾಡಲಾಗುತ್ತಿತ್ತು. ಮಾಚಿದೇವರ ಗುಡಿ ಶಿಥಿಲವಾಗಿದೆ. ಜೀರ್ಣೋದ್ಧಾರ ಮಾಡಿ ಗುಡಿಯ ಸುತ್ತಲಿನ ಭೂಮಿಯನ್ನು ಸರ್ವೆ ಮಾಡಿಸಿಕೊಡಲು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಶಿವಕುಮಾರ್ ಎಚ್.,ಶಿಕ್ಷಕ ಹರೀಶ್,ಸಂಘದ ಉಪಾಧ್ಯಕ್ಷರಾದ ಬಿ. ವೆಂಕಟರಾಮಯ್ಯ, ಪಿ. ರಾಜಣ್ಣ, ಖಜಾಂಚಿ ಕೆಂಚಪ್ಪ, ಕಾನೂನು ಸಲಹೆಗಾರ ಜಿ.ಕೆ. ಚಂದ್ರಶೇಖರ್, ಸಹ ಕಾರ್ಯದರ್ಶಿ ಬಿ.ಸಿ. ಚಂದ್ರಶೆಖರ್ ಮಾತನಾಡಿದರು.

ಮುಖಂಡರಾದ ಎನ್.ಇ.ಎಸ್. ರಮೇಶ್, ಯತೀಶ್, ಚಂದ್ರಪ್ಪ, ಗಿರೀಶ್, ಮಂಜುನಾಥ್, ಹರೀಶ್‌ಕುಮಾರ್‌, ರಂಗನಾಥ್, ಜಯರಾಮ್, ರವಿಕುಮಾರ್, ಧನಂಜಯ, ಗಿರೀಶ್, ಹರೀಶ್ ಟಿ.ಎನ್., ದೊಡ್ಡಸೋಮನಹಳ್ಳಿ ವಿಜಯಾ ಶ್ರೀನಿವಾಸಮೂರ್ತಿ, ತಿರುಮಲೆ ಮಂಜುಳಾ ಶ್ರೀನಿವಾಸ್, ರಾಧಾ ಗೋವಿಂದರಾಜು, ಮುನಿರತ್ನಮ್ಮ ಕೃಷ್ಣಕುಮಾರ್, ಬಾಲಾಜಿ ಇದ್ದರು. ಪುರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.