ADVERTISEMENT

ಕಾವೇರಿ ನದಿಯಲ್ಲಿ ಸೇನೆಯ ತರಬೇತಿ ಲಾಂಚರ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:25 IST
Last Updated 11 ಮೇ 2020, 19:25 IST
ಕಾವೇರಿ ನದಿಯಲ್ಲಿ ಪತ್ತೆಯಾದ ಲಾಂಚರ್‌ಗಳು
ಕಾವೇರಿ ನದಿಯಲ್ಲಿ ಪತ್ತೆಯಾದ ಲಾಂಚರ್‌ಗಳು   

ರಾಮನಗರ: ಸೈನಿಕರಿಗೆ ತರಬೇತಿ ನೀಡಲು ಬಳಸುವ ತರಬೇತಿ ಲಾಂಚರ್‌ಗಳು ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು, ಅವುಗಳ ಪೈಕಿ ಐದು ಸ್ಫೋಟಗೊಂಡಿವೆ.

ಜಿಲ್ಲೆಯ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ಅರಣ್ಯ ವಲಯ ವ್ಯಾಪ್ತಿಯ ಬೊಮ್ಮಸಂದ್ರ ಬಳಿ ಕಾವೇರಿ ನದಿಯಲ್ಲಿ ಒಟ್ಟು6 ಲಾಂಚರ್‌ಗಳು ಸಿಕ್ಕಿದ್ದು, ಅದರಲ್ಲಿ ಒಂದು ಸಜೀವವಾಗಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಇವು ಗೋಚರಿಸಿದ್ದು, ಸ್ಥಳೀಯರು ಅದನ್ನು ತಂದು ಬೆಂಕಿಯಲ್ಲಿ ಸುಟ್ಟಿದ್ದಾರೆ. ಈ ಸಂದರ್ಭ ಐದು ಲಾಂಚರ್‌ಗಳು ಸ್ಫೋಟಗೊಂಡಿವೆ. ಜನರು ದೂರ ನಿಂತಿದ್ದರಿಂದ ಅನಾಹುತ ತಪ್ಪಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಾಂಬ್‌ ನಿಷ್ಕ್ರಿಯ ದಳದೊಂದಿಗೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಒಂದು ಲಾಂಚರ್‌ ಸಕ್ರಿಯವಾಗಿರುವುದು ಪತ್ತೆಯಾಯಿತು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯದ ಅನುಮತಿ ಪಡೆದು ನಿಷ್ಕ್ರಿಯಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

ಸುಮಾರು15 ವರ್ಷಗಳ ಹಿಂದೆ ಈ ಪ್ರದೇಶವು ಕಾವೇರಿ ವನ್ಯಜೀವಿ ಧಾಮಕ್ಕೆ ಒಳಪಡುವ ಮುನ್ನ ಇಲ್ಲಿ ಭೂಸೇನೆಯು ತನ್ನ ಸೈನಿಕರಿಗೆ ಆಗಾಗ್ಗೆ ತರಬೇತಿ ನೀಡುತ್ತಿತ್ತು. ಈ ಸಂದರ್ಭ ಈ ಲಾಂಚರ್‌ಗಳನ್ನು ಬಳಸಿರಬಹುದು ಎಂದು ಹೇಳಲಾಗಿದೆ. ವನ್ಯಜೀವಿ ಧಾಮ ಘೋಷಣೆಯಾದ ತರುವಾಯ ಇಲ್ಲಿ ತರಬೇತಿ ಚಟುವಟಿಕೆಗಳು ನಿಂತಿವೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.