ಮಾಗಡಿ: ತಾಲ್ಲೂಕಿನ ವ್ಯಾಸರಾಯನ ಪಾಳ್ಯ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ತಾಲ್ಲೂಕಿನ 145ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಸ್ಮಾರ್ಟ್ ಎಲ್ಇಡಿ ಟಿವಿ ವಿತರಿಸಲಾಯಿತು.
ಈ ವೇಳೆ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ‘ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಹೆಣ್ಣು ಮಕ್ಕಳು ಕೈ ಹಿಡಯಬೇಕಿದೆ’ ಎಂದು ತಿಳಿಸಿದರು.
‘ಗ್ಯಾರಂಟಿ ಮೂಲಕ ನಮ್ಮ ತೆರಿಗೆ ಹಣವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪೋಲು ಮಾಡುತ್ತಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾವು ಗ್ಯಾರಂಟಿ ಮೂಲಕ ಹಣ ಪೋಲು ಮಾಡುತ್ತಿಲ್ಲ ಅಭಿವೃದ್ಧಿ ಮಾಡುತ್ತಿದ್ದೇವೆ’ ಎಂದರು.
‘ವ್ಯಾಸರಾಯನ ಪಾಳ್ಯ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದ್ದು, ಗ್ರಾಮ ಠಾಣಾ ಮುಂದುವರೆಸುವಂತೆ ಕೇಳಿಕೊಳ್ಳಲಾಗಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ನಮ್ಮ ತಂದೆ- ತಾಯಿ ಹೆಸರಿನಲ್ಲಿ ಶಾಲಾ ನಿರ್ಮಾಣಕ್ಕೆ ಉಚಿತವಾಗಿ ಸೈಟ್ ನೀಡಲಾಗಿದೆ. ಹೈ ಮಾಸ್ಕ್ ನಿರ್ಮಾಣ, ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಸ್ಮಶಾನ ನಿರ್ಮಾಣಕ್ಕೆ ಎರಡು ಎಕರೆ ಜಾಗ ಗುರುತಿಸಿದರೆ ಅಭಿವೃದ್ಧಿಪಡಿಸಲಾಗುವುದು. ಇನ್ನು ಆರು ತಿಂಗಳಲ್ಲಿ ನಿಮ್ಮ ಗ್ರಾಮಕ್ಕೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಲಾಗುವುದು’ ಎಂದು ತಿಳಿಸಿದರು.
ಸಿಡಿಪಿಒ ಸುರೇಂದ್ರ ಮಾತನಾಡಿ, ಸಕ್ಷಮ್ ಅಂಗನವಾಡಿ 2.0 ಪೌಷ್ಠಿಕಾಂಶದ ಕೊರತೆ ಹೋಗಲಾಡಿಸಿ, ಮಕ್ಕಳ ಬೆಳವಣಿಗೆ ಸುಧಾರಿಸುವ ಕಾರ್ಯಕ್ರಮವಾಗಿದೆ. ಇದು ಅಂಗನವಾಡಿ ಕೇಂದ್ರಗಳನ್ನು ಸಬಲೀಕರಣಗೊಳಿಸಿ ಮೂಲಭೂತ ಸೌಕರ್ಯ, ಪೌಷ್ಠಿಕ ಆಹಾರ ಮತ್ತು ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದೆ. ಜೊತೆಗೆ ಅಂಗನವಾಡಿ ಕೇಂದ್ರಗಳಿಗೆ ಉತ್ತಮ ಕಟ್ಟಡ, ಪಿಠೋಪಕರಣ, ಆಟಿಕೆ ಮತ್ತು ಬೋಧನಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ.ಜೈಪಾಲ್, ಗ್ರಾ.ಪಂ.ಸದಸ್ಯ ತಟವಾಳ್ ನಾಗರಾಜು ಸೇರಿದಂತೆ ತಾಲ್ಲೂಕಿನ ವಿವಿಧ ಅಂಗನವಾಡಿ ಶಿಕ್ಷಕಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.