ಕನಕಪುರ:ತಾಲ್ಲೂಕಿನ ಕೆರಳಾಳುಸಂದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡುಪ್ರಾಣಿಯೊಂದು ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಕೊಪ್ಪಲಿನಲ್ಲಿದ್ದ 40ಕ್ಕೂ ಹೆಚ್ಚು ಕುರಿಗಳನ್ನು ಸಾಯಿಸಿದೆ.
ದಾಳಿಯಲ್ಲಿ ಸಾವನ್ನಪ್ಪಿದ ಕುರಿಗಳು ಭೋಜೇಗೌಡ ಎಂಬುವರಿಗೆ ಸೇರಿದ್ದು, ₹ 3 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮನೆ ಹಿಂಭಾಗ ನಿರ್ಮಿಸಲಾಗಿದ್ದ ಕೊಪ್ಪಲಿನಲ್ಲಿಯೇ ಪ್ರತಿ ರಾತ್ರಿ ಕುರಿಗಳನ್ನು ಕೂಡಿ ಹಾಕಲಾಗುತ್ತಿತ್ತು. ಮುಂಜಾನೆ ಕೊಪ್ಪಲಿನಿಂದ ಕುರಿಗಳನ್ನುಹೊರ ಬಿಡಲು ಹೋದಾಗ ಅವುಗಳು ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ.
ಕುರಿ ಹಿಂಡಿನ ಮೇಲೆ ಚಿರತೆ ದಾಳಿಮಾಡಿರಬಹುದು. ಕುರಿಗಳ ಮರಣೋತ್ತರ ಪರೀಕ್ಷೆ ವರದಿ ಕೈಸೇರಿದ ನಂತರ ಸತ್ಯಾಂಶ ತಿಳಿಯಲಿದೆ ಎಂದುಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಲಯ ಅರಣ್ಯ ಅಧಿಕಾರಿ ದಾಳೇಶ್ ಮತ್ತು ಉಪ ವಲಯ ಅರಣ್ಯ ಅಧಿಕಾರಿ ದೇವರಾಜು ಶಂಕೆ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಚಿರತೆಗಳು ಗ್ರಾಮಗಳಿಗೆ ನುಗ್ಗಿ ಬೀದಿನಾಯಿಗಳನ್ನು ಬೇಟೆಯಾಡುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಕೊಪ್ಪಲಿಗೆ ನುಗ್ಗಿ ಕುರಿಗಳನ್ನು ಸಾಯಿಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.