ADVERTISEMENT

ಪ್ರಕೃತಿ ಪ್ರೀತಿಸುವ ಮನೋಭಾವ ಮೂಡಲಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 13:40 IST
Last Updated 12 ಜೂನ್ 2019, 13:40 IST
ಚನ್ನಪಟ್ಟಣ ರಾಂಪುರ ಗ್ರಾಮದಲ್ಲಿ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಚನ್ನಪಟ್ಟಣ ರಾಂಪುರ ಗ್ರಾಮದಲ್ಲಿ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು   

ಚನ್ನಪಟ್ಟಣ: ಪ್ರತಿಯೊಬ್ಬರಲ್ಲೂ ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ, ಉಳಿಸಿ ಬೆಳೆಸುವ ಮನೋಭಾವ ಮೂಡಬೇಕು ಎಂದು ರಾಂಪುರ ಪರಿಸರ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಡಾ.ಆರ್.ಎನ್. ಮಲವೇಗೌಡ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಶ್ರಮದಾನ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರ ನಾಶದಿಂದಾಗಿ ಮಾನವ ಹಾಗೂ ಪ್ರಾಣಿ ಸಂಕುಲದ ಬದುಕು ದುರ್ಬರವಾಗುತ್ತಿದೆ ಎಂದರು.

ಆಯಾ ಗ್ರಾಮದ ಯುವಕರು ತಿಂಗಳಿಗೊಮ್ಮೆಯಾದರೂ ಪರಿಸರ ಕಾಳಜಿಯುಳ್ಳ ಕೆಲಸ ಮಾಡಿದರೆ ಸದ್ಯ ದೇಶ ಎದುರಿಸುತ್ತಿರುವ ನಾನಾ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು. ಪರಿಸರ ಉಳಿಸುವ ಕೆಲಸ ಮಾಡಿದರೆ ಮುಂದಿನ ತಲೆಮಾರಿಗೆ ಉತ್ತಮ ವಾತಾವರಣವನ್ನು ಕೊಡುಗೆಯಾಗಿ ನೀಡಬಹುದು ಎಂದರು.

ADVERTISEMENT

‌ಒಕ್ಕೂಟದ ಅಧ್ಯಕ್ಷ ಆರ್.ಬಿ.ಸ್ವಾಮಿ ಮಾತನಾಡಿ, ಅನುಪಯುಕ್ತ ಜಾಗಗಳಲ್ಲಿ ಸಸಿ ನೆಡುವ ಮೂಲಕ ಹಾಗೂ ತ್ಯಾಜ್ಯವಸ್ತುಗಳ ಸರಿಯಾದ ನಿರ್ವಹಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಬದ್ದರಾಗೋಣ ಎಂದರು.

ಒಕ್ಕೂಟದ ಕಾರ್ಯದರ್ಶಿ ವಿಜಯ್ ರಾಂಪುರ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಮರಗಳ ಮಾರಣಹೋಮದಿಂದಾಗಿ ಮನುಕುಲ ಸಂಕಷ್ಟ ಎದುರಿಸುವಂತಾಗಿದೆ. ಕೆನಡಾ ದೇಶದಲ್ಲಿ ಒಬ್ಬ ವ್ಯಕ್ತಿಗೆ 8,953 ಮರ, ರಷ್ಯಾದಲ್ಲಿ 4,461 ಮರ, ಅಮೇರಿಕದಲ್ಲಿ 716 ಮರಗಳು ಇವೆ. ಆದರೆ ಭಾರತದಲ್ಲಿ ಮಾತ್ರ ಒಬ್ಬ ವ್ಯಕ್ತಿಗೆ ಕೇವಲ 28 ಗಿಡಗಳಿವೆ ಎಂದು ಇತ್ತೀಚೆಗೆ ಪರಿಸರ ಜಾಗೃತಿ ಸಂಸ್ಥೆಯೊಂದು ಜಾಗತಿಕ ಮಟ್ಟದಲ್ಲಿ ಸಮೀಕ್ಷೆ ನಡೆಸಿದೆ. ಇದು ನಿಜಕ್ಕೂ ನೋವಿನ ಸಂಗತಿ ಎಂದರು.

ನಿವೃತ್ತ ಅಧೀನ ಕಾರ್ಯದರ್ಶಿ ಆರ್.ವಿ.ವೆಂಕಟೇಶಯ್ಯ, ಮಾತೃಭೂಮಿ ಸೇವಾ ಸಂಸ್ಥೆಯ ಮಹೇಶ್, ಸುದರ್ಶನ್, ಮಹೇಶ್, ಒಕ್ಕೂಟದ ಖಜಾಂಚಿ ಆರ್.ವಿ. ಗಿರೀಶ್, ಸದಸ್ಯರಾದ ಆರ್.ಎನ್.ಶಿವಣ್ಣ, ಉಮೇಶಣ್ಣ, ಮರಿಸ್ವಾಮಿ, ಆರ್.ಎಸ್. ಶಶಿಧರ್, ಆರ್.ಕುಮಾರ್, ಆರ್.ಕೆ.ಮಲವೇಗೌಡ, ಅನಿಲ್, ಕೃಷ್ಣ, ಬಸವರಾಜು, ಮನೋಜ್ ಹಾಗೂ ರಾಂಪುರ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.