ADVERTISEMENT

ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 13:12 IST
Last Updated 2 ಮಾರ್ಚ್ 2019, 13:12 IST
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಶನಿವಾರ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಶನಿವಾರ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು   

ರಾಮನಗರ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಒಂದು ಹಾಗೂ ಎರಡನೇ ವಾರ್ಡಿನ ಜನರು ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಬೀಗ ಹಾಕಿ ಶನಿವಾರ ಪ್ರತಿಭಟಿಸಿದರು.

ವಿನಾಯಕನಗರದ ನಾಗರಿಕರಿಗೆ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. 9 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಿದರೆ ಹೇಗೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಎರಡು ವರ್ಷಗಳ ಹಿಂದೆ ಮೂರು ಕೊಳವೆಬಾವಿ ಕೊರೆಯಲಾಗಿದೆ. ಆದರೆ ಅವುಗಳಿಗೆ ಪಂಪು ಮೋಟಾರ್ ಅಳವಡಿಸಿಲ್ಲ ಎಂದು ಮಂಡಳಿಯ ಎಇಇ ಪುಟ್ಟಯ್ಯ ಅವರನ್ನು ಪ್ರಶ್ನಿಸಿದರು.

ಒಂದು ಮತ್ತು ಎರಡನೇ ವಾರ್ಡಿನ ಕೆಲವು ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಜಲಮಂಡಳಿ ಅಧಿýಕಾರಿಗಳು, ದಿನನಿತ್ಯ ಕೂಲಿ ಮಾಡುವ ಜನರು ವಾಸಿಸುತ್ತಿರುವ ವಿನಾಯಕನಗರದ ನಿವಾಸಿಗಳಿಗೆ 9 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಅಧಿಕಾರಿಗಳು ಸರ್ಕಾರ ಮತ್ತು ಶಾಸಕರ ಅನುದಾನದ ಬರಲಿ, ನೀರು ಪೂರೈಸುತ್ತೇವೆ ಎಂಬ ಅಸಂಬದ್ಧ ಹೇಳಿಕೆ ನೀಡುವುದನ್ನು ಬಿಟ್ಟು ಶೀಘ್ರವಾಗಿ ನೀರು ಪೂರೈಸಲು ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ಡಿ.ಕೆ. ಶಿವಕುಮಾರ್, ನಿವಾಸಿಗಳಾದ ಮಂಜುನಾಥ್, ದೊಡ್ಡಿ ಉಮೇಶ್, ಲಚ್ಚಪ್ಪ, ರಾಮಣ್ಣ, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.