ADVERTISEMENT

ಮಾಗಡಿ | ಬಸ್‌ ಕೊರತೆ: ಪ್ರಯಾಣಿಕರ ಪರದಾಟ

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಹಳೆ ಸರ್ಕಾರಿ ಬಸ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 5:39 IST
Last Updated 16 ಜೂನ್ 2025, 5:39 IST
ಮಾಗಡಿ ಸರ್ಕಾರಿ ಡಿಪೋದಲ್ಲಿ ಕೆಟ್ಟು ನಿಂತಿರುವ ಸರ್ಕಾರಿ ಬಸ್‌ಗಳು
ಮಾಗಡಿ ಸರ್ಕಾರಿ ಡಿಪೋದಲ್ಲಿ ಕೆಟ್ಟು ನಿಂತಿರುವ ಸರ್ಕಾರಿ ಬಸ್‌ಗಳು   

ಮಾಗಡಿ: ತಾಲ್ಲೂಕಿನಲ್ಲಿ ಸರ್ಕಾರಿ ಬಸ್‌ಗಳ ಕೊರತೆ ಇದ್ದು, ರಜಾ ದಿನಗಳಲ್ಲಿ ಪ್ರಯಾಣಿಕರು ಬಸ್‌ಗಳಿಗಾಗಿ ಪರದಾಡುವಂತಾಗಿದೆ.

ಮಾಗಡಿ ಡಿಪೋದಲ್ಲಿ ಹಳೆ ಬಸ್‌ಗಳು ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಸರಿಯಾದ ಸಮಯಕ್ಕೆ ಬಸ್ ಬಾರದಿರುವುದು ರೈತರು, ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಬಿಡುವಂತೆ ಡಿಪೋ ಬಳಿ ಗಲಾಟೆ ಮಾಡಿದ್ದಾರೆ. ಹೆಚ್ಚುವರಿ ಬಸ್‌ ಬಿಟ್ಟಾಗ ಮಾತ್ರ ಕಾಲೇಜು ಹಾಗೂ ಕೆಲಸಕ್ಕೆ ತೆರಳಲು ಸಹಾಯವಾಗುತ್ತದೆ ಎಂಬುದು ಪ್ರಯಾಣಿಕರ ಮಾತಾಗಿದೆ.

ಸಿಬ್ಬಂದಿ ಹಾಗೂ ಬಸ್‌ಗಳ ಕೊರತೆ: ಮಾಗಡಿ ಸರ್ಕಾರಿ ಡಿಪೋದಲ್ಲಿ 30ಕ್ಕೂ ಹೆಚ್ಚು ಚಾಲಕರು ಹಾಗೂ ನಿರ್ವಾಹಕರ ಕೊರತೆಯಿದೆ. ಜೊತೆಗೆ ತಾಂತ್ರಿಕ ಮೇಲ್ವಿಚಾರಕರು, ಸಂಚಾರಿ ವಿಚಾರಕರ ಕೊರತೆಯಿಂದ ಮಾಗಡಿ ಡಿಪೋದಿಂದ ಸರ್ಕಾರಿ ಬಸ್‌ಗಳನ್ನು ರೂಟ್‌ಗಳಿಗೆ ಬಿಡಲು ಸಮಸ್ಯೆಯಾಗುತ್ತಿದೆ. 10ಕ್ಕೂ ಹೆಚ್ಚು ಬಸ್‌ಗಳ ಕೊರತೆಯಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇಲಾಖೆ ಕೂಡಲೇ ಚಾಲಕರು, ನಿರ್ವಾಹಕರು ಮತ್ತು ಹೊಸ ಬಸ್‌ಗಳನ್ನು ಡಿಪೋಗೆ ನೀಡಿದರೆ ರೂಟ್‌ಗಳಿಗೆ ಬಸ್‌ಗಳನ್ನು ಕಳುಹಿಸಿ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬಹುದು ಎಂಬುದು ಬಸ್ ಡಿಪೋ ಮೇಲ್ವಿಚಾರಕ ಅವರ ಮಾತಾಗಿದೆ.

ADVERTISEMENT

ಅವಧಿ ಮುಗಿಸುವ ಎಂಟು ಬಸ್‌ಗಳು: ಮಾಗಡಿ ಡಿಪೋದಲ್ಲಿ ಸಂಚರಿಸುತ್ತಿರುವ ಎಂಟು ಸರ್ಕಾರಿ ಬಸ್‌ಗಳು ಇನ್ನೂ ಆರು ತಿಂಗಳಲ್ಲಿ ಎಫ್‌ಸಿ ಅವಧಿ ಮುಗಿಯಲಿದ್ದು, ಈ ಬಸ್‌ಗಳನ್ನು ಸ್ಕ್ರಾಪ್ ಮಾಡಿ ರೂಟ್‌ಗಳಿಗೆ ಬಿಡಲು ಆಗುವುದಿಲ್ಲ. ಇದರಿಂದ ಬಸ್‌ಗಳ ಕೊರತೆ ಇನ್ನೂ ಹೆಚ್ಚಾಗಲಿದೆ. ಹಾಗಾಗಿ ಇಲಾಖೆ ಮಾಗಡಿ ಡಿಪೋಗೆ 15 ಹೆಚ್ಚು ಬಸ್‌ಗಳನ್ನು ನೀಡಿದಾಗ ಮಾತ್ರ ಬಸ್‌ಗಳ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ವಾಯು ವಜ್ರ ಬಸ್‌ಗಳ ಕಡಿತ: ಡಿಪೋದಲ್ಲಿ 10ಕ್ಕೂ ಹೆಚ್ಚು ವಾಯು ವಜ್ರ ಬಸ್‌ಗಳ ಸಂಚಾರವನ್ನು ನಿಲ್ಲಿಸಿ ಕೇವಲ ಮೂರು ಬಸ್‌ಗಳು ಸಂಚರಿಸುತ್ತಿವೆ. ವಾಯುವಜ್ರ ಬಸ್‌ಗಳ ಸಂಖ್ಯೆ ಹೆಚ್ಚಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಹೆಚ್ಚಳ: ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಏಪ್ರಿಲ್ 2024 ರಿಂದ ಮೇ 2025ವರೆಗೆ 70.55 ಲಕ್ಷ ಮಂದಿ ಮಹಿಳೆಯರು‌ ಉಚಿತವಾಗಿ ಪ್ರಯಾಣಿಸಿದ್ದಾರೆ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಬಸ್‌ಗಳ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಪ್ರಯಾಣಿಕರು ಬಸ್‌ಗಳಿಗಾಗಿ ಪರದಾಡುತ್ತಿದ್ದಾರೆ. 

ಮಾಗಡಿ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತಲು ಮುಗಿಬಿದ್ದಿರುವ ಸಾರ್ವಜನಿಕರು 

ಹೊಸ ಬಸ್ ಬಿಡಿ ಶಕ್ತಿ ಯೋಜನೆ ಜಾರಿ ಬಳಿಕ ಮಹಿಳಾ ಪ್ರಯಾಣಿಕ ಸಂಖ್ಯೆ ಹೆಚ್ಚಿದೆ. ಹೊಸ ಬಸ್ ಮತ್ತು ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡುವ ಮೂಲಕ ಪ್ರಯಾಣಿಕರಿಗೆ ಅನುಕೂಲತೆ ಮಾಡಿಕೊಡಲಿ.  ಶ್ರೀಪತಿಹಳ್ಳಿ ರಾಜಣ್ಣ ಮುಖಂಡರು ಮಾಗಡಿ ====== ಹಿರಿಯ ನಾಗರಿಕರಿಗೆ ತೊಂದರೆ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಒಂದೇ ಬಸ್ಸಿನಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹೆಚ್ಚುವರಿ ಬಸ್ ಬಿಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಎನ್.ಶಿವಲಿಂಗಯ್ಯ ನಿಸರ್ಗ ಪರಿಚರಣ ಟ್ರಸ್ಟ್ ಅಧ್ಯಕ್ಷರು ಮಾಗಡಿ. ======

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.