ಕೊಲೆಯಾದ ತಿಮ್ಮಮ್ಮ ಮತ್ತು ಆರೋಪಿ ರಂಗಯ್ಯ
ಮಾಗಡಿ: ತಾಲ್ಲೂಕಿನ ಮತ್ತಿಕೆರೆ ಗ್ರಾಮದಲ್ಲಿ ತಂಗಳು ಊಟದ ಕಾರಣಕ್ಕೆ ವೃದ್ಧ ದಂಪತಿ ನಡುವೆ ಶುರುವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯಗೊಂಡಿದೆ. 75 ವರ್ಷದ ರಂಗಯ್ಯ ತನ್ನ ಪತ್ನಿ ತಿಮ್ಮಮ್ಮಗೆ (65) ತುರೇಮಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ತಲೆ ಮರೆಸಿಕೊಳ್ಳಲು ತಿರುಪತಿಗೆ ತೆರಳಲು ಮುಂದಾಗಿದ್ದ ಆತನನ್ನು, ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಹೊಂದಿರುವ ದಂಪತಿ, ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಪಾರ್ಶ್ವವಾಯು ತಗುಲಿದ್ದರಿಂದ ಚೇತರಿಸಿಕೊಳ್ಳುತ್ತಿದ್ದ ಪತಿಗೆ ಪತ್ನಿಯೇ ಆಸರೆಯಾಗಿದ್ದರು. ಆದರೆ, ಪತ್ನಿ ಜೊತೆ ಸಣ್ಣಪುಟ್ಟ ವಿಷಯಕ್ಕೂ ರಂಗಯ್ಯ ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ತಿಮ್ಮಮ್ಮ ಹದಿನೈದು ದಿನಗಳ ಹಿಂದೆ ಪುತ್ರಿ ಮನೆಗೆ ಹೋಗಿದ್ದರು. ಬಳಿಕ ಸಂಬಂಧಿಕರು ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದರು.
ತಿಮ್ಮಮ್ಮ ಅವರಿಗೂ ವಯಸ್ಸಾಗಿರುವುದರಿಂದ ಅಡುಗೆ ಸೇರಿದಂತೆ ಮನೆ ಕೆಲಸವನ್ನು ಮಾಡುವುದು ಕಷ್ಟವಾಗಿತ್ತು. ಆದರೂ, ಸರಿದೂಗಿಸಿಕೊಂಡು ಹೋಗುತ್ತಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಎಂದಿನಂತೆ ಪತಿಗೆ ಊಟ ಕೊಟ್ಟಾಗ, ರಾತ್ರಿ ಉಳಿದಿದ್ದ ತಂಗಳು ಬಡಿಸಿದ್ದರು. ಇದಕ್ಕೆ ಕೆರಳಿದ ರಂಗಯ್ಯ ಪತ್ನಿ ಜೊತೆ ಜಗಳ ಶುರು ಮಾಡಿದ್ದ ಎಂದು ಮಾಗಡಿ ಪೊಲೀಸರು ತಿಳಿಸಿದರು.
ಮಾತಿಗೆ ಮಾತು ಬೆಳೆದಿದ್ದರಿಂದ ರಂಗಯ್ಯ ಕೋಣೆಯಲ್ಲಿದ್ದ ತುರೇಮಣೆಯಿಂದ ಪತ್ನಿಯ ತಲೆ ಮತ್ತು ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ, ಸ್ಥಳದಿಂದ ಪರಾರಿಯಾಗಿ ರಾಮನಗರಕ್ಕೆ ಬಂದಿದ್ದಾನೆ. ಕೊಲೆ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ತಿರುಪತಿಗೆ ಹೋಗಲು ರಾಮನಗರಕ್ಕೆ ಬಂದಿದ್ದ ರಂಗಯ್ಯನನ್ನು ಖಚಿತ ಮಾಹಿತಿ ಮೇರೆಗೆ, ಬಸ್ ಹತ್ತುವುದಕ್ಕೆ ಮುಂಚೆಯೇ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.