
ಮಾಗಡಿ: ಪುರಸಭೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು ಸೋಲೂರಿನ ಐಎಎಸ್ಸಿ ಘಟಕಕ್ಕೆ ರವಾನೆ ಮಾಡುವ ಮೂಲಕ ಕಸ ಮುಕ್ತ ಪಟ್ಟಣವಾಗಿ ಮಾರ್ಪಡುವ ನಿಟ್ಟಿನಲ್ಲಿ ಮಾಗಡಿ ಪುರಸಭೆ ಮುಂದಾಗಿದೆ.
ಅಕ್ಟೋಬರ್ನಿಂದ ಪ್ರತಿದಿನ ಮಾಗಡಿ ಪಟ್ಟಣದಲ್ಲಿ ಉತ್ಪಾದನೆಯಾಗುವ 10ಟನ್ಗೂ ಹೆಚ್ಚು ಘನ ತ್ಯಾಜ್ಯವನ್ನು ಸೋಲೂರಿಗೆ ಕಳುಹಿಸಲಾಗುತ್ತಿದೆ. ತಿರುಮಲೆ ಕಸ ಸಂಗ್ರಹ ಘಟಕಕ್ಕೆ ಇನ್ನು ಮುಂದೆ ಕಸ ಹಾಕಲಾಗುವುದಿಲ್ಲ. ಸೋಲೂರಿನ ಘಟಕದಲ್ಲಿ ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ ಗೊಬ್ಬರ ಮತ್ತು ಇತರ ಉಪಯುಕ್ತ ವಸ್ತು ತಯಾರಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ತಿರುಮಲೆ ಘಟಕದಲ್ಲಿ ಈಗಾಗಲೇ ಶೇಖರಣೆಯಾಗಿರುವ ತ್ಯಾಜ್ಯವನ್ನು ವಿಂಗಡಿಸಿ, ಪ್ಲಾಸ್ಟಿಕ್ ವಸ್ತುಗಳನ್ನು ಬಿಡದಿ ಘಟಕಕ್ಕೆ ಕಳುಹಿಸಲಾಗುವುದು. ಈ ಸಂಪೂರ್ಣ ಪ್ರಕ್ರಿಯೆ ಮುಗಿಯಲು ಒಂದರಿಂದ ಎರಡು ವರ್ಷಗಳ ಕಾಲ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿರುಮಲೆ ಕಸ ಸಂಗ್ರಹ ಘಟಕ ದೀರ್ಘಕಾಲದಿಂದಲೂ ಸ್ಥಳೀಯರ ವಿರೋಧಕ್ಕೆ ಕಾರಣವಾಗಿತ್ತು. ದೇವಾಲಯದ ಸಮೀಪದಲ್ಲಿದ್ದ ಈ ಘಟಕದಿಂದ ಹರಡುವ ದುರ್ವಾಸನೆ, ಮಾರಕ ರೋಗ ಭಯ ಮತ್ತು ಪರಿಸರ ಮಾಲಿನ್ಯ ಪ್ರಮುಖ ಸಮಸ್ಯೆಯಾಗಿತ್ತು. ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ಹಲವು ಸಲ ಟೀಕಿಸಿದ್ದರು. ಈ ಸಮಸ್ಯೆ ಕುರಿತು ಹಸಿರು ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ನಿವೃತ್ತ ಯೋಧ ಶಿವಲಿಂಗಯ್ಯ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ದವು. ಪುರಸಭೆ ಈ ಹೊಸ ತೀರ್ಮಾನವನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.
ತಿರುಮಲೆ ಬಳಿ ಕಸ ಸಂಗ್ರಹ ಘಟಕಕ್ಕೆ ಕಸ ಹಾಕದಂತೆ ಎಚ್ಚರಿಕೆ ಕ್ರಮ ವಹಿಸಬೇಕು. ಈಗ ಸೋಲೂರಿಗೆ ಕಸ ಕಳುಹಿಸುತ್ತಿರುವುದು ಒಳ್ಳೆಯ ನಿರ್ಧಾರ. ತಿರುಮಲೆ ಸಂಗ್ರಹ ಘಟಕ ಶಾಶ್ವತವಾಗಿ ಮುಚ್ಚಬೇಕುಟಿ.ಎಂ.ಶ್ರೀನಿವಾಸ್ ತಿರುಮಲೆ ನಿವಾಸಿ ಮಾಗಡಿ
ಪರಿಸರ ಕಾಪಾಡಿ
ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಿದಂತೆ ಮಾಗಡಿ ಪಟ್ಟಣದಲ್ಲಿ ಸಂಗ್ರಹವಾಗುವ ಕಸ ಸೋಲೂರಿನ ಘಟಕಕ್ಕೆ ಪ್ರತಿದಿನ ಲಾರಿ ಮೂಲಕ ಕಳುಹಿಸಿ ಕೊಡಲಾಗುತ್ತಿದೆ. ಲಾರಿ ಸಾಗಣೆ ವೆಚ್ಚವನ್ನು ಪುರಸಭೆ ನಿಧಿಯಿಂದ ವಹಿಸಲಾಗುತ್ತದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಮನೆ ಮುಂದೆ ಬರುವ ಕಸದ ಗಾಡಿಗೆ ಹಾಕುವ ಮೂಲಕ ಪರಿಸರ ಕಾಪಾಡುವ ಕೆಲಸ ಮಾಡಬೇಕು.ಶಿವರುದ್ರಮ್ಮ ಪುರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.