ಮಾಗಡಿ: ‘ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯವು ಭಾರತೀಯರಿಗೆ ಬೆಳಕಾಗಿದೆ’ ಎಂದು ಮುಖಂಡ ಗಂಗಣ್ಣ ನಾಯಕ ಹೇಳಿದರು.
ನಾಯಕನಪಾಳ್ಯದಲ್ಲಿ ಮಹರ್ಷಿ ವಾಲ್ಮೀಕಿ ಕಲೆ ಮತ್ತು ಕ್ರೀಡಾ ಸಂಘದಿಂದ ಶನಿವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.
‘ವಾಲ್ಮೀಕಿ ಇಲ್ಲದೆ ರಾಮಾಯಣವಿಲ್ಲ, ರಾಮಾಯಣವಿಲ್ಲದೆ ವಾಲ್ಮೀಕಿ ಇಲ್ಲ ಎಂದು ನಮ್ಮ ಪೂರ್ವಿಕರು ಬಾಲ್ಯದಲ್ಲಿ ಹೇಳುತ್ತಿದ್ದರು. ರಾಮಾಯಣ ಮಹಾನದಿ ಇದ್ದಂತೆ. ವಾಲ್ಮೀಕಿ ಅವರ ವಿದ್ವತ್ತಿನಿಂದ ಅದು ಅರಳಿದೆ. ಉತ್ತಮ ಆದರ್ಶ, ಉಜ್ವಲ ಧರ್ಮ ಹಾಗೂ ಸುಂದರ ಜೀವನ ಸ್ವರೂಪವನ್ನು ರಾಮಾಯಣ ತಿಳಿಸಿದೆ. ನಾವೆಲ್ಲರೂ ಕಡ್ಡಾಯವಾಗಿ ರಾಮಾಯಣ ಗ್ರಂಥವನ್ನು ಮನೆಯಲ್ಲಿ ನಿತ್ಯವೂ ಓದಬೇಕು’ ಎಂದು ಸಲಹೆ ನೀಡಿದರು.
ವಾಲ್ಮೀಕಿ ಸಮುದಾಯದವರಿಗೆ ಸರ್ಕಾರ ಹೆಚ್ಚಿನ ಸವಲತ್ತು ನೀಡಿ ಮುಖ್ಯವಾಹಿನಿಗೆ ತರಬೇಕಿದೆ. ಪಾಳೇಗಾರ, ನಾಯಕ, ಪರಿವಾರ, ಬೇಡ, ತಳವಾರ ಹೆಸರುಗಳಿಂದ ಕರೆಯಲ್ಪಡುತ್ತಿರುವ ಬುಡಕಟ್ಟು ಸಮುದಾಯದವರು ತೀರಾ ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಲಕ್ಷ್ಮಿನರ
ಸಿಂಹಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿರುವ ಬೇಡರ ಕಣ್ಣಪ್ಪ ದೇವಾಲಯ ಅನ್ಯರ ವಶದಲ್ಲಿದೆ. ನ್ಯಾಯಾಲಯದ ಆದೇಶವಾಗಿದ್ದರೂ ದೇವಾಲಯದ ಭೂಮಿಯನ್ನು ಸಮುದಾಯದ ವಶಕ್ಕೆ ನೀಡಿಲ್ಲ ಎಂದು ಹೇಳಿದರು.
ಗುಡೇಮಾರನಹಳ್ಳಿ ತಳಾರಿ ಗಂಗಪ್ಪ ನಾಯಕ ಮಾಗಡಿಯಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ್ದರು. ಸಂಪಾಜೆರಾಯ, ಸಾವಂದರಾಯ ಸಾವನದುರ್ಗ
ದಲ್ಲಿ ಏಳುಸುತ್ತಿನ ಕೋಟೆ ಕಟ್ಟಿಸಿದ್ದರು. ಹುಲಿಕಲ್ ಪಾಳೇಗಾರರ ಸ್ಮಾರಕಗಳನ್ನು ಉಳಿಸಬೇಕಿದೆ ಎಂದರು.
ಸಂಘದ ಉಪಾಧ್ಯಕ್ಷ ಗಂಗನರಸಿಂಹಯ್ಯ, ರಾಜಾರಂಗಪ್ಪ ನಾಯಕ, ದೊಡ್ಡಿ ವೀರಶೈವ ಮುಖಂಡರಾದ ಚಂದ್ರಶೇಖರ್, ಜಯಮ್ಮ, ಗೋಪಾಲಯ್ಯ, ಪತ್ರಕರ್ತ ದೊಡ್ಡಿ ಜಗದೀಶ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.