ರಾಮನಗರ: ಜಿಲ್ಲೆಯಲ್ಲಿ ಗೋವುಗಳ ಅಕ್ರಮ ಸಾಗಣೆ ಹಾಗೂ ವಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಯುವ ಪಡೆ ಪದಾಧಿಕಾರಿಗಳು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಅವರಿಗೆ ಮನವಿ ಸಲ್ಲಿಸಿದರು.
ಕಾನೂನಿನ ಪ್ರಕಾರ 12 ವರ್ಷ ದಾಟಿದ ದನ, ಎತ್ತು, ಕೋಣ, ಹಾಗೂ ಎಮ್ಮೆ ಇತರೆ ಪ್ರಾಣಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ವಧಾಗೃಹಗಳಲ್ಲಿ ಮಾತ್ರ ವಧಿಸಲು ಅವಕಾಶ ಇರುತ್ತದೆ. ಆದರೆ ಹಿಂದಿನ ವರ್ಷಗಳಲ್ಲಿ ಎಲ್ಲೆಂದರಲ್ಲಿ ಗೋವುಗಳನ್ನು ವಧೆ ಮಾಡಲಾಗಿತ್ತು. ಈ ವರ್ಷ ವಿಶೇಷವಾಗಿ ಕೋವಿಡ್-19 ಹಿನ್ನೆಲೆಯಲ್ಲಿ ಗೋವುಗಳ ಅಕ್ರಮ ಸಾಗಾಟ ಮತ್ತು ವಧೆಯನ್ನು ಸಂಪೂರ್ಣವಾಗಿ ತಡೆಯುವ ದಿಕ್ಕಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಾನೂನು ಜಾರಿ ಮಾಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಕೇಂದ್ರೀಯ ಮೋಟಾರು ವಾಹನ ನಿಯಮದಡಿ ಸಾರಿಗೆ ಪ್ರಾಧಿಕಾರದಿಂದ ವಿಶೇಷ ಅನುಮತಿ ಪಡೆದ ವಾಹನಗಳಲ್ಲಿ ಮಾತ್ರ ಪ್ರಾಣಿಗಳನ್ನು ಸಾಗಿಸಲು ಅವಕಾಶ ಇದೆ. ಆದರೆ ಮುಂದಿನ ವಾರದಲ್ಲಿ ಬಹಳಷ್ಟು ಪ್ರಾಣಿಗಳನ್ನು ಅಕ್ರಮ ಸಾಗಾಟ ಮಾಡಿ ಜಿಲ್ಲೆಗೆ ತರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಸ್ಥಳ, ರಸ್ತೆ, ಖಾಲಿ ಮೈದಾನ, ಮನೆಯಂಗಳ, ನದಿ ತಟ ಮುಂತಾದ ಸ್ಥಳಗಳಲ್ಲಿ ಬಲಿ ಪ್ರಾಣಿಗಳನ್ನು ತಂದು ಇರಿಸಿಕಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪ್ರಾಣಿಗಳನ್ನು ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಭಾರತೀಯ ಯುವ ಪಡೆಯ ರಾಜ್ಯ ಘಟಕದ ಅಧ್ಯಕ್ಷ ಆರ್ಯನ್ ಧನುಷ್ ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಹೇಮಂತ್ ಗೌಡ, ಜಂಟಿ ಕಾರ್ಯದರ್ಶಿ ಹರೀಶ್, ಸಂಚಾಲಕ ಸಚಿನ್, ಕಾನೂನು ಸಲಹೆಗಾರ ನೀಲಕಂಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.