ADVERTISEMENT

ಮಕ್ಕಳಿಗೆ ಹಾಲಿನಪುಡಿ ಪೂರೈಕೆಗೆ ಚಿಂತನೆ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 13:01 IST
Last Updated 11 ಸೆಪ್ಟೆಂಬರ್ 2020, 13:01 IST
   

ರಾಮನಗರ:'ರಾಜ್ಯದಲ್ಲಿ ಲಾಕ್‌ಡೌನ್‌ ಕಾರಣಕ್ಕೆ126 ಸಾವಿರ ಟನ್‌ ನಷ್ಟು ಹಾಲಿನ ಪುಡಿ ಮಾರಾಟ ಆಗದೇ ಉಳಿದಿದೆ. ಇದನ್ನು ವಿದ್ಯಾಗಮ ಯೋಜನೆ ಅಡಿ ಮನೆಪಾಠ ಕಲಿಯುತ್ತಿರುವ ಮಕ್ಕಳಿಗೆ ವಿತರಣೆ ಮಾಡಲು ಚಿಂತನೆ ನಡೆದಿದೆ’ ಎಂದು ಸಚಿವ ಸೋಮಶೇಖರ್‍ ತಿಳಿಸಿದರು.

ಚನ್ನಪಟ್ಟಣದ ಕಣ್ವ ರಸ್ತೆಯಲ್ಲಿರುವ ಕೆಎಂಎಫ್‌ ಹಾಲಿನ ಪುಡಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

'ಕೋವಿಡ್ ಕಾರಣಕ್ಕೆ ಮುಂಬೈ ಮೊದಲಾದ ಪ್ರದೇಶಗಳಿಗೆ ಹಾಲಿನ ರಫ್ತು ಬಂದ್‌ ಆಗಿತ್ತು. ಹೀಗೆ ಹೆಚ್ಚುವರಿಯಾಗಿ ಉಳಿದ ಹಾಲನ್ನು ಪೌಡರ್‌ ಆಗಿ ಪರಿವರ್ತಿಸಿ ಇಡಲಾಗಿದೆ' ಎಂದು ಹೇಳಿದರು.

ADVERTISEMENT

'ಹಾಲಿನ ಪುಡಿಯು ಉತ್ಪಾದನೆಯಾಗಿ ತಿಂಗಳುಗಳು ಕಳೆದಿದೆ.ಹೆಚ್ಚೆಂದರೆ ಇನ್ನು ಒಂದು ವರ್ಷ ಶೇಖರಿಸಬಹುದು. ಹೀಗಾಗಿ ಶಾಲಾ ಮಕ್ಕಳಿಗೆ ಇದನ್ನು ವಿತರಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು’ ಎಂದು ಮಾಹಿತಿ ನೀಡಿದರು.

ಡ್ರಗ್‌ ದಂಧೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ

ಸ್ಟಾರ್‌ ನಟರು, ರಾಜಕಾರಣಿಗಳೂ ಸೇರಿದಂತೆ ಡ್ರಗ್ಸ್‌ ದಂಧೆಯಲ್ಲಿ ಯಾರೇ ಭಾಗಿಯಾಗಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಜಮೀರ್‌ ಅಹಮ್ಮದ್‌ ಹೆಸರು ಇದರಲ್ಲಿ ತಳಕು ಹಾಕಿಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿ 'ಮುಖ್ಯಮಂತ್ರಿ, ಗೃಹ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿ ಈ ದಂಧೆಗೆ ಪೂರ್ಣ ವಿರಾಮ ಹಾಕಲು ಸೂಚನೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷಿಸಬೇಕಿರುವುದು ನಮ್ಮ ಕರ್ತವ್ಯ’ ಎಂದರು.

ಬಿಜೆಪಿ ಜೊತೆ ನಟಿ ರಾಗಿಣಿ ನಂಟಿನ ಕುರಿತು ಮಾತನಾಡಿ 'ಯಾವ ರಾಜಕೀಯ ಪಕ್ಷಗಳೂ ಸಿನಿಮಾದವರನ್ನು ಆಹ್ವಾನ ನೀಡಿ ಪ್ರಚಾರಕ್ಕೆ ಕರೆಯುವುದಿಲ್ಲ. ಆಯಾ ಅಭ್ಯರ್ಥಿಗಳಿಗೆ ಆತ್ಮೀಯರಾಗಿದ್ದವರು ವಿಶ್ವಾಸಕ್ಕೆ ಪ್ರಚಾರಕ್ಕೆ ಬಂದು ಹೋಗುತ್ತಾರೆ. ಡ್ರಗ್ಸ್‌ ದಂಧೆಯಲ್ಲಿ ಕೇಳಿಬಂದಿರುವ ಹೆಸರುಗಳಿಗೂ ಪಕ್ಷಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟನೆ ನೀಡಿದರು.

ದಸರಾ ಸಭೆ: ಕೋವಿಡ್ ಕಾರಣಕ್ಕೆ ಈ ಬಾರಿ ದಸರಾ ಸರಳ ಆಚರಣೆಗೆ ಸರ್ಕಾರ ತೀರ್ಮಾನಿಸಿದೆ. ದಸರಾವನ್ನು ಕೊರೊನಾ ಸೈನಿಕರು ಉದ್ಘಾಟಿಸಲಿದ್ದು, ಶನಿವಾರ ಸಂಜೆ ಮೈಸೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.