ADVERTISEMENT

ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 16:18 IST
Last Updated 1 ಜನವರಿ 2021, 16:18 IST
ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಚಿವ ಸಿ.ಸಿ. ಪಾಟೀಲ ಮಾತನಾಡಿದರು
ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಚಿವ ಸಿ.ಸಿ. ಪಾಟೀಲ ಮಾತನಾಡಿದರು   

ರಾಮನಗರ: ಅಕ್ರಮವಾಗಿ ಗಣಿಗಾರಿಕೆ ಮಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಭೆ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಕ್ವಾರೆ ಹಾಗೂ ಗಣಿಗಾರಿಕೆಯಲ್ಲಿ ಸಂರಕ್ಷಿತ ವಲಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿಪಡಿಸಿದ ಸ್ಥಳಗಳಲ್ಲಿ ಗಣಿಗಾರಿಕೆ ನಡೆಸಬೇಕು. ಉಲ್ಲಂಘನೆಯಾದಲ್ಲಿ ಪರಿಶೀಲನೆ ನಡೆಸಿ ನೋಟಿಸ್‌ ಜಾರಿ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.

ಕನಕಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಾರೋಹಳ್ಳಿ ಚೆಕ್‌ಪೋಸ್ಟ್, ಕನಕಪುರ-ಸಂಗಮ ರಸ್ತೆಯಲ್ಲಿರುವ ಟಿ.ಬೇಕುಪ್ಪೆ ಚೆಕ್‌ಪೋಸ್ಟ್ ಹಾಗೂ ಬಿಡದಿ- ದೊಡ್ಡಮುದುವಾಡಿಯಲ್ಲಿರುವ ಹೆಗ್ಗಡಗೆರೆ ಕ್ರಾಸ್ ಚೆಕ್ ಪೋಸ್ಟ್‌ ಬಳಿಕ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ 53 ಕ್ರಷರ್‌ಗಳಿದ್ದು, 47 ಚಾಲ್ತಿಯಲ್ಲಿರುತ್ತದೆ. 6 ನಿಷ್ಕ್ರಿಯವಾಗಿರುತ್ತದೆ. ಕಟ್ಟಡ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ 110 ರಲ್ಲಿ 65 ಚಾಲ್ತಿಯಲ್ಲಿದ್ದು, 44 ನಿಷ್ಕ್ರಿಯವಾಗಿರುತ್ತದೆ . ಜಿಲ್ಲೆಯಲ್ಲಿ 2018-19 ರಲ್ಲಿ ₨ 4.62 ಕೋಟಿ, 2019-20 ರಲ್ಲಿ ₨ 5.26 ಕೋಟಿ ಹಾಗೂ 2020-21 ರಲ್ಲಿ ನವೆಂಬರ್ 2020 ರ ಅಂತ್ಯದವರೆಗೆ ₨ 3.02 ಕೋಟಿ ಡಿ.ಎಂ.ಎಫ್ ಮೊತ್ತ ಸಂಗ್ರಹವಾಗಿರುತ್ತದೆ. ಇದರಲ್ಲಿ ಕ್ರಿಯಾಯೊಜನೆ ರೂಪಿಸಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಟಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಸುಮಿತ್ರಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.