ಹಾರೋಹಳ್ಳಿ: ಅನೇಕ ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡುತ್ತ ಬಂದಿರುವ ರೈತರಿಗೆ ಶೀಘ್ರದಲ್ಲೇ ಸಾಗುವಳಿ ಚೀಟಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ತಿಳಿಸಿದರು.
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ರೈತರು ಹಲವು ವರ್ಷಗಳಿಂದಲೂ ಸಾಗುವಳಿ ಚೀಟಿಗಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಸಣ್ಣಪುಟ್ಟ ಕಾರಣ ನೀಡಿ ಸಾಗುವಳಿ ವಿತರಣೆಯನ್ನು ತಡ ಮಾಡಬಾರದು. ಸಂಪೂರ್ಣವಾಗಿ ಪರಿಶೀಲಿಸಿ ಸಾಧ್ಯವಾದಷ್ಟು ಬೇಗ ಸಾಗುವಳಿ ಚೀಟಿಗಳನ್ನು ವಿತರಿಸಬೇಕು. ಏನಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಪಿಎಲ್ನಿಂದ ಎಪಿಎಲ್; ಜಿಲ್ಲೆಯಲ್ಲಿ ಬಹುತೇಕ ಬಿಪಿಎಲ್ ಕಾರ್ಡ್ ಗಳು ಇದ್ದಕ್ಕಿದ್ದ ಹಾಗೆ ಎಪಿಎಲ್ ಕಾರ್ಡುಗಳಾಗಿ ಬದಲಾಗುತ್ತಿವೆ. ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು. ಈ ರೀತಿಯ ಸಮಸ್ಯೆಗಳಿಂದ ನೈಜ ಫಲಾನುಭವಿಗಳೂ ಸಹ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಆಹಾರ ಸರಬರಾಜು ಇಲಾಖೆಯವರು ಗಮನಹರಿಸಬೇಕು ಎಂದರು.
ಹಾರೋಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸೈಟುಗಳನ್ನು ವಿತರಿಸುವ ಕಾರ್ಯ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ತಹಸಿಲ್ದಾರ್ ಸಿ.ಆರ್.ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ, ಆರ್ಐ ನಾಗರಾಜು ಸೇರಿದಂತೆ ಅಧಿಕಾರಿ ವರ್ಗದವರು ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.