ಚನ್ನಪಟ್ಟಣ: ಶಂಕರಾಚಾರ್ಯರ ತತ್ವ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಂ.ರಾಜು ಅಭಿಪ್ರಾಯಪಟ್ಟರು.
ಪಟ್ಟಣದ ನೀಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಶ್ರೀಶಂಕರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶಂಕರಾಚಾರ್ಯರು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಮಾಜದಲ್ಲಿ ಬೇರೂರಿದ್ದ ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದವರು. ಜನಸಾಮಾನ್ಯರ ನಡುವಿನ ಅಂತರಗಳ ಬಗ್ಗೆ ಅಸಮಾಧಾನ ಹೊಂದಿದ್ದ ಅವರು ಸಮಾಜವನ್ನು ಸುಧಾರಣೆ ಮಾಡಲು ಶ್ರಮಿಸಿದವರು’ ಎಂದರು.
ಉಪನ್ಯಾಸಕ ಮಹೇಂದ್ರಕುಮಾರ್ ಮಾತನಾಡಿ, ‘ಶಂಕರಾಚಾರ್ಯರು ಧರ್ಮ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಪ್ರಮುಖರು. ಭಾರತೀಯ ಸನಾತನ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ ಮಹಾನ್ ವ್ಯಕ್ತಿ. ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಆತ್ಮ–ಪರಮಾತ್ಮದ ಕಲ್ಪನೆಯನ್ನು ಹೇಳಿದವರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗುರುಪೀಠಗಳನ್ನು ಸ್ಥಾಪಿಸಿ ಗುರುಪರಂಪರೆಗೆ ನಾಂದಿ ಹಾಡಿದವರು. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಆಚರಣೆ ಅರ್ಥಗರ್ಭಿತ’ ಎಂದರು.
ಟ್ರಸ್ಟ್ ಕಾರ್ಯದರ್ಶಿ ಅಚ್ಯುತರಾವ್, ಉದ್ಯಮಿ ಮಳೂರು ಕೃಷ್ಣಕುಮಾರ್, ರಾಮನಗರದ ಶಂಕರ ಮಠದ ಅಧ್ಯಕ್ಷ ಶೇಷಗಿರಿರಾವ್, ರಾಮಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಶೇಷಾದ್ರಿ ಅಯ್ಯರ್, ಶ್ರೀ ರಾಮ ಸೇವಾ ಸಮಿತಿಯ ಉಪಾಧ್ಯಕ್ಷ ಕೆ.ನಾಗಪ್ಪ, ಉಪನ್ಯಾಸಕರಾದ ಕೃಷ್ಣಕುಮಾರ್, ಸ್ವಾಮಿನಾಥನ್, ಅರ್ಚಕ ರವೀಂದ್ರ, ಎ.ದಿನೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.