ಕನಕಪುರ: ಪ್ರಕೃತಿ ಮುಂದೆ ಯಾರೂ ದೊಡ್ಡವರಲ್ಲ; ಪ್ರಕೃತಿಯನ್ನು ಸಾವನ್ನು ಗೆದ್ದವರು ಯಾರು ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಹೇಳಿದರು.
ಇಲ್ಲಿನ ಕೆಂಕೇರಮ್ಮ ದೇವಾಲಯದಲ್ಲಿ ಲಯನ್ಸ್ ಮತ್ತು ಲಿಯೋ ಸಂಸ್ಥೆಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಣ್ಣಿಗೆ ಕಾಣದ ಒಂದು ಸಣ್ಣ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ.ಹೊಸದಾಗಿ ಬಂದಿರುವ ಕಾಯಿಲೆಯಾಗಲಿ ವೈರಸ್ ಆಗಲಿ ಅಲ್ಲ. ಈ ಹಿಂದೆಯೇ ಇಂತಹ ಕಾಯಿಲೆ ಕಾಣಿಸಿಕೊಂಡು ಇಡೀ ಊರು ನಾಶವಾಗಿರುವ ಉದಾಹರಣೆಗಳಿವೆ ಎಂದರು.
ಕೊರೊನಾದಿಂದ ದೇವಸ್ಥಾನ, ಮಸೀದಿ, ಚರ್ಚ್ಗಳ ಬಾಗಿಲು ಹಾಕು ವಂಥ ಪರಿಸ್ಥಿತಿ ಉಂಟಾಗಿದೆ. ಪ್ರಕೃತಿ ತನ್ನಿಂದ ತಾನೇ ಜನಸಂಖ್ಯೆ ನಿಯಂತ್ರಿಸಿಕೊಳ್ಳುತ್ತದೆ ಎಂದು ಹೇಳಿದರು.
ಸರ್ಕಾರ ಮೊದಲಿನಂತೆ ಹೆಚ್ಚಿನ ಮುತುವರ್ಜಿ ತೋರುತ್ತಿಲ್ಲ. ಈಗ ಕಾಯಿಲೆ ಬಗ್ಗೆಯೂ ಜನರಲ್ಲಿ ಭಯ ಹೋಗಿದೆ. ಸೋಂಕು ಬಂದವರನ್ನು ಮೊದಲಿನಂತೆ ಯಾರು ನೋಡುತ್ತಿಲ್ಲ. ನಮ್ಮ ನಡುವೆ ಯಾರಿಗೆ ಬೇಕಾದರೂ ಸೋಂಕಿತರಬಹುದು ಎಂದರು.
ಲಯನ್ಸ್ ಸಂಸ್ಥೆ ಮರಸಪ್ಪ ರವಿ ಮಾತನಾಡಿ, ’ಸಂಸ್ಥೆಯು ಪರಿಸರ ಉಳಿಸುವ ಮತ್ತು ಬೆಳೆಸುವುದಕ್ಕೆ ಹೆಚ್ಚಿನ ಒತ್ತುಕೊಟ್ಟು ಕೆಲಸ ಮಾಡುತ್ತಿದೆ. ಸಂಸ್ಥೆಯಲ್ಲಿ ಹೊಸದಾಗಿ ಪದಾಧಿಕಾರಿಗಳು ಅಧ್ಯಕ್ಷರು ಆದಾಗ ಗಿಡನೆಡುವ ಕಾರ್ಯಕ್ರಮವನ್ನೇ ಮೊದ
ಲನೇಕಾರ್ಯಕ್ರಮವನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರದಿಂದ ಪ್ರತಿ ಗ್ರಾಮದಲ್ಲೂ ಅರಳಿಕಟ್ಟೆ ಮತ್ತು ಗುಂಡು ತೋಪು ನಿರ್ಮಾಣ ಮಾಡುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರಿಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು(ಚಿಕ್ಕಪ್ಪ), ಡಾ.ವಿಜಯಕುಮಾರ್, ದೇವಸ್ಥಾನ ಟ್ರಸ್ಟನ್ ಅಧ್ಯಕ್ಷ ನಂಜುಂ ಡಪ್ಪ, ನಗರಸಭೆ ಸದಸ್ಯರಾದ ವಿಜಯ್ಕುಮಾರ್, ಜೈರಾಮ್, ಕಿರಣ್, ಸರಸ್ಪತಿ ಶ್ರೀನಿವಾಸ್, ಸುನಿತಾ ರವಿ, ಮುಖಂಡರಾದ ತೋಟದ ಬಾಬಣ್ಣ, ಲಿಂಗಣ್ಣ, ಶ್ರೀನಿವಾಸ್, ಲಿಯೋ ಅಧ್ಯಕ್ಷ ಪ್ರಜ್ವಲ್, ಲಯನ್ ಮತ್ತು ಲಿಯೋ ಸಂಸ್ಥೆಯ ಪದಾಧಿಕಾರಿ, ದೇವಸ್ಥಾನ ಸಮಿತಿ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.