ರಾಮನಗರ: ನಗರದಲ್ಲಿ ಮಂಗಳವಾರ ಚಾಮುಂಡೇಶ್ವರಿ ದೇವಿಯ ಕರಗ ನಡೆದಿದ್ದು, ಈ ಮೂಲಕ ಶಕ್ತಿದೇವತೆಗಳ ಆರಾಧನೆ ಸಂಪನ್ನಗೊಂಡಿತು.
ದೇಗುಲದ ಆವರಣದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಕರಗ ಮೆರವಣಿಗೆ ನಡೆಯಿತು. ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ದಿನವಿಡೀ ದೇಗುಲಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು. ರಾತ್ರಿಯೂ ಭಕ್ತರ ದಂಡು ನೆರೆದಿತ್ತು.
ರಾಮನಗರದಲ್ಲಿ ಬರೋಬ್ಬರಿ 9ಕ್ಕೂ ಹೆಚ್ಚು ಶಕ್ತಿ ದೇವತೆಯರ ಕರಗ ಮಹೋತ್ಸವ ಜರುಗುತ್ತದೆ. ಎಲ್ಲ ಶಕ್ತಿ ದೇವತೆಗಳ ದೇಗುಲಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಳವಾರ ಬೆಳಿಗ್ಗೆ ಚಾಮುಂಡೇಶ್ವರಿ, ಮಗ್ಗದಕೆರೆ ಮಾರಮ್ಮ, ಬಿಸಿಲು ಮಾರಮ್ಮ, ಶೆಟ್ಟಹಳ್ಳಿ ಬೀದಿ ಹಾಗೂ ಐಜೂರು ಆದಿಶಕ್ತಿ ಅಮ್ಮನವರ ಮಡೀ ನೀರು ಕರಗ ಮಹೋತ್ಸವ ದೇವಾಲಯದ ಆವರಣದಲ್ಲಿ ಜರುಗಿತು.
ಹೂವಿನ ಕರಗ: ಪ್ರತಿವರ್ಷ ಮಂಗಳವಾರ ರಾತ್ರಿ ಶಕ್ತಿ ದೇವತೆಗಳ ಹೂವಿನ ಕರಗ ಮಹೋತ್ಸವಕ್ಕೆ ಚಾಲನೆ ನೀಡಿ, ಬುಧವಾರ ಬೆಳಿಗ್ಗೆ ದೇವಾಲಯ ಆವರಣದಲ್ಲಿನ ನಡೆಸಲಾಗುತ್ತಿದ್ದ ಕೊಂಡ ತುಳಿದ ಬಳಿಕ ಮುಕ್ತಾಯ ಕಾಣುತ್ತಿತ್ತು.
ಆದರೆ, ಈ ಬಾರಿ ಕೋವಿಡ್ ಕಾರಣಕ್ಕೆ ಮಂಗಳವಾರ ಸಂಜೆಯೇ ಚಾಮುಂಡೇಶ್ವರಿ, ಬಿಸಿಲು ಮಾರಮ್ಮ, ಮುತ್ತುಮಾರಮ್ಮ, ಮಗ್ಗದ ಕೆರೆ ಮಾರಮ್ಮ, ಭಂಡಾರಮ್ಮ, ಆದಿಶಕ್ತಿ ದೇವತೆಗಳ ಹೂವಿನ ಕರಗ ಜರುಗಿತು. ಕೋವಿಡ್ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಕೊಂಡೋತ್ಸವ ನಡೆಯಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.