ಚನ್ನಪಟ್ಟಣ: ‘ಸಂಘ- ಸಂಸ್ಥೆಗಳು ಸಮಾಜದಲ್ಲಿ ನೊಂದವರಿಗೆ ನೆರವಾಗುವಂತಹ ಸತ್ಕಾರ್ಯ ಕೈಗೊಳ್ಳಲು ಸರ್ವರೂ ಸಹಕಾರ ನೀಡಬೇಕು’ ಎಂದು ಶುಭೋದಯ ಸಾಂಸ್ಕೃತಿಕ ಸ್ನೇಹ ಬಳಗದ ನೂತನ ಅಧ್ಯಕ್ಷ ಎಂ. ಶಿವಮಾದು ಹೇಳಿದರು.
ನಗರದಲ್ಲಿ ಶನಿವಾರ ನಡೆದ ಶುಭೋದಯ ಸಾಂಸ್ಕೃತಿಕ ಸ್ನೇಹ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದೆ. ಸ್ವಾರ್ಥಕ್ಕಾಗಿ ಬದುಕುವ ರೀತಿ-ನೀತಿಗಳು ವಿಜೃಂಭಿಸುತ್ತಿವೆ. ನೊಂದವರಿಗೆ ಸಾಂತ್ವನ ಹೇಳಿ ಮಾರ್ಗದರ್ಶನ ನೀಡುವುದು ಕ್ಷೀಣಿಸುತ್ತಿವೆ. ಸಂಘ–ಸಂಸ್ಥೆಗಳಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಜೀವನದಲ್ಲಿ ಸಮಾಜ ಮೆಚ್ಚುವಂತಹ ಅತ್ಯುತ್ತಮ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ಸೋಗಾಲ ರಾಮು, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಲೋಕೇಶ್ ಹಾಜರಿದ್ದರು.
ಆಯ್ಕೆ:ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರೈಲ್ವೆ ಇಲಾಖೆಯ ನಿವೃತ್ತ ಸಬ್ ಇನ್ಸ್ಪೆಕ್ಟರ್ ರಾಂಪುರ ಮಲ್ಲೇಶ್, ಗೌರವಾಧ್ಯಕ್ಷರಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಬಿ. ಪುಟ್ಟಲಿಂಗಯ್ಯ, ಖಜಾಂಚಿಯಾಗಿ ಜಿಲ್ಲಾ ನಿವೃತ್ತ ಅಧಿಕಾರಿ ಖಜಾನಾಧಿಕಾರಿ ಸಿ.ಎಸ್. ಶ್ರೀಕಂಠಯ್ಯ ಅವಿರೋಧವಾಗಿ ಆಯ್ಕೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.