ADVERTISEMENT

ಕಳಪೆ ಪೈಪ್‌ಲೈನ್‌ಗೆ ಆಕ್ರೋಶ

ಜಲ ಜೀವನ್‌ ಮಿಷನ್‌ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 5:03 IST
Last Updated 12 ಸೆಪ್ಟೆಂಬರ್ 2021, 5:03 IST
ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಗ್ರಾಮಸ್ಥರು ಕಳಪೆ ಪೈಪ್‌ಗಳನ್ನು ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದರು
ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಗ್ರಾಮಸ್ಥರು ಕಳಪೆ ಪೈಪ್‌ಗಳನ್ನು ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದರು   

ಚನ್ನಪಟ್ಟಣ: ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕಳಪೆ ಪೈಪ್‌ಗಳನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ಶನಿವಾರ ಗುತ್ತಿಗೆದಾರರ ವಿರುದ್ಧ ಕೆಂಡಮಂಡಲವಾಗಿ ಪೈಪ್‌ಗಳನ್ನು ಕಿತ್ತು ತುಳಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ನೀರು ಸರಬರಾಜಿಗೆ ಅಳವಡಿಸುತ್ತಿರುವ ಪೈಪ್‌ಗಳು ಕಳಪೆ ಗುಣಮಟ್ಟದವು. ಅಳವಡಿಸುವ ಸಂದರ್ಭದಲ್ಲೇ ಮುರಿದು ಹೋಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕಾಮಗಾರಿ ತಡೆದ ಗ್ರಾಮಸ್ಥರು, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಕಾಮಗಾರಿಗೆ ಅಳವಡಿಸುತ್ತಿರುವ ಸಿಪಿವಿಸಿ ಪೈಪ್‌ಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ. ಮುಟ್ಟಿದರೆ ಮುರಿದು ಚೂರಾಗುತ್ತಿವೆ. ಇಷ್ಟು ಕಳಪೆ ಗುಣಮಟ್ಟದ ಪೈಪ್‌ ಹಾಕಿದರೆ ಅದು ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಮಧುಸೂದನ್ ಗಮನಕ್ಕೆ ಗ್ರಾಮಸ್ಥರು ತಂದರು. ಈ ಹಿನ್ನೆಲೆಯಲ್ಲಿ ಅವರು ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಚಕ್ಕೆರೆ ಗ್ರಾ.ಪಂ. ಉಪಾಧ್ಯಕ್ಷ ಸುಜಯ್ ಕುಮಾರ್, ಗ್ರಾಮಸ್ಥರಾದ ಪ್ರಕಾಶ್, ಮಾಧು, ರಘು, ಶಿವುಕುಮಾರ್, ಮನು, ಸತೀಶ್, ಲೋಕೇಶ್, ಆಕರ್ಷ್, ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.