ರಾಮನಗರ: ಇಲ್ಲಿನ ಸ್ಪೂರ್ತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಶ್ರದ್ಧಾಂಜಲಿ ಸಭೆ ನಡೆಯಿತು.
‘ಕಾರ್ನಾಡರು ದೇಶ ಕಂಡ ಅತ್ಯುತ್ತಮ ಸಾಹಿತಿ. ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಾಹಿತ್ಯ ರಚನೆಯ ಜತೆಗೆ ನಟ, ನಿರ್ದೇಶಕ, ಚಿಂತಕರಾಗಿದ್ದರು’ ಎಂದು ಸಾಹಿತಿ ಡಾ. ಮಧುಸೂದನಾಚಾರ್ಯ ಜೋಷಿ ತಿಳಿಸಿದರು.
‘ಅವರ ಅಕ್ಷರ ಸೇವೆ ಅನನ್ಯವಾಗಿದೆ. ದೊಡ್ಡ ಸಾಧನೆ ಮಾಡಿದ ಒಂದು ವೈಚಾರಿಕ ಶಕ್ತಿ ಕಣ್ಮರೆಯಾಗಿರುವುದು ದುಃಖದ ಸಂಗತಿ. ಇವತ್ತು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಬಿಟ್ಟುಹೋದ ಸಾಹಿತ್ಯ, ಲೇಖನ ಹಾಗೂ ವೈಚಾರಿಕತೆಯ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ’ ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ಗೌರವ ಕಾರ್ಯದರ್ಶಿಗಳಾದ ಎಚ್.ಎಸ್. ರೂಪೇಶ್ ಕುಮಾರ್, ಎಚ್.ಎಲ್. ರವೀಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಪದಾಧಿಕಾರಿಗಳಾದ ಎಚ್.ಕೆ. ಶೈಲಾ ಶ್ರೀನಿವಾಸ್, ಗೋವಿಂದಸ್ವಾಮಿ, ಚೌ.ಪು. ಸ್ವಾಮಿ, ಸಮದ್, ಮತ್ತಿಕೆರೆ ಚಲುವರಾಜು, ಕೂ.ಗಿ. ಗಿರಿಯಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಕಿರಣ್, ಮಂಜುನಾಥ್ ಇದ್ದರು.
**
ಶಾಲೆ, ಸರ್ಕಾರಿ ಕಚೇರಿಗಳಿಗೆ ರಜೆ
ಜ್ಞಾನಪೀಠ ಪುರಸ್ಕೃತ ಕಾರ್ನಾಡರ ನಿಧನದ ಹಿನ್ನಲೆಯಲ್ಲಿ ಸೋಮವಾರ ಜಿಲ್ಲೆಯಲ್ಲಿನ ಶಾಲೆ, ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಯಿತು.
ಕಾರ್ನಾಡರ ನಿಧನದ ಸುದ್ದಿ ಬಿತ್ತರಗೊಳ್ಳುವ ಹೊತ್ತಿಗೆ ಮಕ್ಕಳು ಶಾಲೆಗೆ ಬಂದಿದ್ದವು. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಬಳಿಕ ಅವರನ್ನು ಕಳುಹಿಸಲಾಯಿತು. ಸರ್ಕಾರಿ ಕಚೇರಿಗಳಿಗೆ ಬಂದಿದ್ದ ಸಿಬ್ಬಂದಿಯೂ ಸಂತಾಪ ಸೂಚಿಸಿ ವಾಪಸ್ ಆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.