ADVERTISEMENT

ಅಪಘಾತ ನೋಡುತ್ತಿದ್ದವರ ಮೇಲೆ ಹರಿದ ನೀರಿನ ಟ್ಯಾಂಕರ್‌!

ಒಟ್ಟು ಮೂವರು ಸಾವು: ಒಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 16:15 IST
Last Updated 23 ಅಕ್ಟೋಬರ್ 2020, 16:15 IST

ಕನಕಪುರ: ತಾಲ್ಲೂಕಿನ ಅಚ್ಚಲು ಗೇಟ್‌ ಬಳಿ ಶುಕ್ರವಾರ ಸಂಜೆ ಅಪಘಾತ ನೋಡುತ್ತ ನಿಂತಿದ್ದವರ ಮೇಲೆ ನೀರಿನ ಟ್ಯಾಂಕರ್‍ ಹರಿದಿದ್ದು, ಘಟನೆಯಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆ.

ಬಳೆ ಬಸಪ್ಪನದೊಡ್ಡಿ ನಿವಾಸಿ ಸಂಪಂಗಿ ರಾಮು (40), ಅಚ್ಚಲು ಬಳಿಯ ಇಂದಿರಾನಗರ ನಿವಾಸಿ ಸುರೇಶ್(60) ಮೃತರು. ಇನ್ನೊಬ್ಬರು ಮೃತರ ಗುರುತು ಪತ್ತೆಯಾಗಿಲ್ಲ. ಅಚ್ಚಲು ನಿವಾಸಿ ಎ.ಸಿ. ನಂದೀಶ್‌ ಎಂಬುವರೂ ಘಟನೆಯಲ್ಲಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಪಂಗಿ ರಾಮು ರಸ್ತೆಯಲ್ಲಿ ನಡೆದು ಹೊರಟಿದ್ದ ಸಂದರ್ಭ ಕಾರ್‍ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟರು. ಈ ಅಪಘಾತವನ್ನು ನೋಡುತ್ತ ನಿಂತಿದ್ದವರ ಮೇಲೆ ಸದ್ಬವ ಕನ್‌ಸ್ಟ್ರಕ್ಷನ್ಸ್‌ ಗೆ ಸೇರಿದ ನೀರಿನ ಟ್ಯಾಂಕರ್‍ ಹಿಂದಿನಿಂದ ಹರಿಯಿತು. ಇದರಿಂದಾಗಿ ಇನ್ನಿಬ್ಬರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.

ADVERTISEMENT

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.