ರಾಮನಗರ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಾಮಿತ್ವ’ ಯೋಜನೆಗೆ ಆಯ್ಕೆಯಾದ ರಾಜ್ಯದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ರಾಮನಗರ ಜಿಲ್ಲೆಯ ನಾಲ್ಕು ಗ್ರಾಮಗಳ 157 ಫಲಾನುಭವಿಗಳಿಗೆ ಪ್ರಧಾನಿನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ತಿ ಕಾರ್ಡ್ ವಿತರಿಸಿದರು.
ರಾಮನಗರ ಸೇರಿದಂತೆ ದೇಶದ ಆರು ರಾಜ್ಯಗಳ ಒಟ್ಟು 763 ಗ್ರಾಮಗಳ ಫಲಾನುಭವಿಗಳ ಮೊಬೈಲ್ ಫೋನುಗಳಿಗೆ ಆಸ್ತಿ ಕಾರ್ಡ್ ಡೌನ್ ಲೋಡ್ ಲಿಂಕ್ ಕಳುಹಿಸುವ ಮೂಲಕ ಅವರು ಯೋಜನೆ ಅನುಷ್ಠಾನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ರಾಮನಗರ ತಾಲ್ಲೂಕಿನ ಎಂ.ಜಿ ಪಾಳ್ಯ, ಮಜರೆ ಸೀಬಕಟ್ಟೆ ಹಾಗೂ ಮಾಗಡಿ ತಾಲ್ಲೂಕಿನ ಬಸವಾಪಟ್ಟಣ ಮತ್ತು ಮಜರೆ ಶಂಭಯ್ಯನ ಪಾಳ್ಯ ಗ್ರಾಮಗಳ 157 ಫಲಾನುಭವಿಗಳು ಮೊಬೈಲ್ನಲ್ಲಿ ಡೌನ್ ಲೋಡ್ ಲಿಂಕ್ ಅನ್ನು ಸ್ವೀಕರಿಸಿದರು.
ಪ್ರಧಾನಿ ವಿಡಿಯೊ ಕಾನ್ಫರೆನ್ಸ್ ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಕ್ರಂ ಅವರು ನಾಲ್ಕು ಗ್ರಾಮಗಳ ಫಲಾನುಭವಿಗಳಿಗೆಸಾಂಕೇತಿಕವಾಗಿ ಆಸ್ತಿ ಕಾರ್ಡ್ ವಿತರಿಸಿದರು.
ಉಳಿದ ಫಲಾನುಭವಿಗಳಿಗೆ ಭೂದಾಖಲೆಗಳ ಉಪನಿರ್ದೇಶಕ ಬಿ.ಜಿ. ಉಮೇಶ ಮತ್ತು ಗ್ರಾಮ ಪಂಚಾಯಿತಿ, ಭೂಮಾಪನ ಇಲಾಖೆಯ ಸಿಬ್ಬಂದಿ ಆಸ್ತಿ ಕಾರ್ಡ್ ವಿತರಿಸಿದರು.
ಅಕ್ರಮಕ್ಕೆ ತಡೆ:
l ಸ್ಪಷ್ಟವಾಗಿ ಮತ್ತು ವೈಜ್ಞಾನಿಕವಾಗಿಆಸ್ತಿ ತೆರಿಗೆ ನಿರ್ಧರಿಸಲು ಸಹಾಯ
l ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಲು ನೆರವು
l ಆಸ್ತಿಯ ಮಾಲೀಕರು ಪರಸ್ಪರ ವಿವಾದಗಳಿಲ್ಲದೆ ಆಸ್ತಿ ಸಮಸ್ಯೆ ಪರಿಹರಿಸಿಕೊಳ್ಳಲು ಸಹಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.