ADVERTISEMENT

ಟಿ.ಹೊಸಳ್ಳಿ ಪಿಡಿಒ ವಿರುದ್ಧ ಪ್ರತಿಭಟನೆ

ದಲಿತರ ಕಾಲೊನಿಗಳಿಗೆ ಸೌಕರ್ಯ ಕಲ್ಪಿಸಲು ಹಿಂದೇಟು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 5:32 IST
Last Updated 22 ಫೆಬ್ರುವರಿ 2021, 5:32 IST
ಟಿ. ಹೊಸಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ವಿರುದ್ಧ ಪ್ರತಿಭಟನೆ ನಡೆಯಿತು
ಟಿ. ಹೊಸಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ವಿರುದ್ಧ ಪ್ರತಿಭಟನೆ ನಡೆಯಿತು   

ಕನಕಪುರ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ದಲಿತರ ಕಾಲೊನಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುತ್ತಿಲ್ಲ. ಜೊತೆಗೆ, ಸಮಸ್ಯೆಗಳನ್ನು ಕೇಳುತ್ತಿಲ್ಲ ಎಂದು ಆರೋಪಿಸಿ ಟಿ. ಹೊಸಳ್ಳಿ ಗ್ರಾಮ ಪಂಚಾಯಿತಿ ಮುಂದೆ ದಲಿತರು ಪ್ರತಿಭಟನಾ ಧರಣಿ ನಡೆಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಟಿ. ಹೊಸಳ್ಳಿ ದಲಿತರ ಕಾಲೊನಿಯಲ್ಲಿನ ಚರಂಡಿಗಳಲ್ಲಿ ಹೂಳು ತೆಗೆಸುತ್ತಿಲ್ಲ. ಓವರ್‌ಹೆಡ್‌ ಟ್ಯಾಂಕ್‌ ಇದ್ದರೂ ಅದರಿಂದ ನೀರು ಕೊಡುತ್ತಿಲ್ಲ. ಮೇಲ್ವರ್ಗದ ಪ್ರತಿ ಮನೆಗೆ ಕೊಳೆವೆ ಸಂಪರ್ಕ ಕೊಟ್ಟಿದ್ದಾರೆ. ದಲಿತರ ಮನೆಗಳಿಗೆ ಮಾತ್ರ ಕೊಡದೆ ತಾರತಮ್ಯ ಎಸಗುತ್ತಿದ್ದಾರೆ ಎಂದು ಪಿಡಿಒ ವಿರುದ್ಧ ಧಿಕ್ಕಾರ ಕೂಗಿದರು.

ಸರ್ಕಾರದಿಂದ ದಲಿತರಿಗೆ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸುತ್ತಿಲ್ಲ. ದಲಿತರು ಎಂಬ ಕಾರಣಕ್ಕೆ ಮೇಲ್ವರ್ಗದವರು ಮುಖ್ಯರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ. ನಾವು ಬೆಟ್ಟಗುಡ್ಡದ ಜಾಗದಲ್ಲಿ ಹೋಗಬೇಕಿದೆ. ಆದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದು ದೂರಿದರು.

ADVERTISEMENT

ನಿರಾಶ್ರಿತರಿಗಾಗಿ ಗ್ರಾಮದಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಅದನ್ನು ಪಂಚಾಯಿತಿಯವರು ತಡೆಗಟ್ಟುತ್ತಿಲ್ಲ. ಪಿಡಿಒ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.