ADVERTISEMENT

ರಾಮನಗರ: ಪುನೀತ್ ಸೇವೆ ಸ್ಮರಣೆ

ವಿವಿಧ ಸಂಘಟನೆಗಳಿಂದ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 3:47 IST
Last Updated 5 ನವೆಂಬರ್ 2021, 3:47 IST
ಚನ್ನಪಟ್ಟಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು
ಚನ್ನಪಟ್ಟಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು   

ಚನ್ನಪಟ್ಟಣ: ಕರುನಾಡಿನ ಕಣ್ಮಣಿ, ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ರಾಜ್ಯ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಯಸಿಂಹವಿಷಾದಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರೀತಿಯ ಅಪ್ಪುವಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇಂದಿನ ಯುವ ಕಲಾವಿದರು ಹಾಡುಗಾರಿಕೆ, ನಟನೆ ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪುನೀತ್ ಆದರ್ಶವಾಗಿದ್ದಾರೆ. ಅಪ್ಪುವಿನ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದು ತಿಳಿಸಿದರು.

ADVERTISEMENT

ಬಿಜೆಪಿ ಮುಖಂಡ ಎಲೇಕೇರಿ ರವೀಶ್ ಮಾತನಾಡಿ, ಪುನೀತ್ ಚಿಕ್ಕ ವಯಸ್ಸಿನಿಂದಲೇ ನಟನೆಯಿಂದ ಖ್ಯಾತಿ ಪಡೆದು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವ ನಾವು ನಿಜಕ್ಕೂ ದುರದೃಷ್ಟವಂತರು. ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ನೆನಪು ಮಾಡಿಕೊಂಡು ನಮ್ಮ ಮಕ್ಕಳಿಗೆ ಅವರ ಅದರ್ಶಗಳನ್ನು ತಿಳಿಸಿಕೊಡಬೇಕಾಗಿದೆ ಎಂದು ತಿಳಿಸಿದರು.‌

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನಿರ್ದೇಶಕ ಚಕ್ಕಲೂರು ಚೌಡಯ್ಯ ಮಾತನಾಡಿ, ತಂದೆ-ತಾಯಿ ಹಾಗೂ ಸಹೋದರರ ಆಸೆ, ಆಕಾಂಕ್ಷೆಯಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಅವರು ನಮಗೆ ನೆನಪು ಮಾತ್ರ ಎಂದು ಹೇಳಿದರು.

ಪುನೀತ್‌ ಅವರು ನಿರ್ಮಿಸಿರುವ ಶಕ್ತಿಧಾಮ ಕೇಂದ್ರ, ವೃದ್ಧಾಶ್ರಮಗಳು, ಆನಾಥಾಶ್ರಮಗಳು, ಶೈಕ್ಷಣಿಕವಾಗಿ ಬಡ ವಿದ್ಯಾರ್ಥಿಗಳಿಗೆ ನೀಡಿರುವ ಸಹಕಾರ ನಿಜಕ್ಕೂ ಪ್ರಶಂಸನೀಯ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು.

ಡಾ.ರಾಜ್ ಬಳಗದ ಅಧ್ಯಕ್ಷ ಮಂಜುನಾಥ್, ಒಕ್ಕಲಿಗರ ವಿದ್ಯಾರ್ಥಿ ನಿಲಯದ ನಿರ್ದೇಶಕ ಶಂಭುಗೌಡ, ಮುಖಂಡರಾದ ಅಪ್ಪಗೆರೆ ಶ್ರೀನಿವಾಸಮೂರ್ತಿ, ಕಿರಣ್ ಕುಮಾರ್, ಶಿವಮೂರ್ತಿ, ರಾಂಪುರ ಪ್ರದೀಪ್, ರಘು, ಜಾನಪದ ಕಲಾವಿದರಾದ ಹೊನ್ನಿಗನಹಳ್ಳಿ ಸಿದ್ದರಾಜು, ನಮನ ಶಿವಕುಮಾರ್, ಎಸ್.ಬಿ. ಗಂಗಾಧರ್, ಮೆಣಸಿಗನಹಳ್ಳಿ ಸ್ವಾಮಿ, ಸತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.