ADVERTISEMENT

ಮಳೆ–ಗಾಳಿ: ನೆಲಕ್ಕೆ ಒರಗಿದ ಜೋಳ, ಅಲ್ಲಲ್ಲಿ ಮುರಿದು ಬಿದ್ದ ವಿದ್ಯುತ್‌ ಕಂಬ

ಅಲ್ಲಲ್ಲಿ ಮುರಿದು ತೆಂಗಿನ ಮರಗಳು

​ಪ್ರಜಾವಾಣಿ ವಾರ್ತೆ
Published 8 ಮೇ 2019, 13:53 IST
Last Updated 8 ಮೇ 2019, 13:53 IST
ಕೈಲಾಂಚ ಸಮೀಪ ಜೋಳದ ಬೆಳೆ ಜಲಾವೃತಗೊಂಡಿರುವುದು
ಕೈಲಾಂಚ ಸಮೀಪ ಜೋಳದ ಬೆಳೆ ಜಲಾವೃತಗೊಂಡಿರುವುದು   

ರಾಮನಗರ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮಂಗಳವಾರ ರಾತ್ರಿ ಜೋರು ಮಳೆ ಸುರಿದಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದ ಹಾನಿಯಾಗಿದೆ.

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಹೆಚ್ಚು ಮಳೆಯಾಗಿದೆ. ಕೈಲಾಂಚ ಸುತ್ತಮುತ್ತ 85 ಮಿಲಿಮೀಟರ್‌ನಷ್ಟು ಮಳೆ ಸುರಿದಿದೆ. ಹುಣಸನಹಳ್ಳಿ, ಕೂನಗಲ್‌, ಕೆ.ಪಿ. ದೊಡ್ಡಿ, ಗೌಡಯ್ಯನ ದೊಡ್ಡಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಇದರಿಂದಾಗಿ ಜಮೀನಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿತ್ತು. ಹುಣಸನಹಳ್ಳಿ, ಕೂನಗಲ್‌ ಸುತ್ತಮತ್ತ ಅಲ್ಲಲ್ಲಿ ತೆಂಗು, ನೀಲಗಿರಿ ಮರಗಳು, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಎತ್ತರಕ್ಕೆ ಬೆಳೆದಿದ್ದ ಜೋಳ ನೆಲಕ್ಕೆ ಒರಗಿದೆ. ತಗ್ಗಿನಲ್ಲಿರುವ ಹೊಲಗಳಿಗೆ ನೀರು ನುಗ್ಗಿದ್ದು, ಬುಧವಾರ ಮಧ್ಯಾಹ್ನವಾದರೂ ಹೊಲದಲ್ಲಿ ನೀರು ನಿಂತಿತ್ತು.

ಎಲ್ಲಿ ಎಷ್ಟೆಷ್ಟು ಮಳೆ?: ರಾಮನಗರ ತಾಲ್ಲೂಕಿನಲ್ಲಿ ಸರಾಸರಿ 25 ಮಿ.ಮೀ. ಮಳೆ ಸುರಿದಿದೆ. ಕನಕಪುರದಲ್ಲಿ 18 ಹಾಗೂ ಮಾಗಡಿಯಲ್ಲಿ 14 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.

ADVERTISEMENT

ಹೊಲ ಹಸನು: ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಕಾರ್ಯಕ್ಕೆ ಅಣಿಯಾಗತೊಡಗಿದ್ದಾರೆ.

ಮುಂಗಾರು ಪೂರ್ವ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಮುಖವಾಗಿ ಎಳ್ಳು, ಹೆಸರು, ಉದ್ದು ಮೊದಲಾದ ಧಾನ್ಯಗಳ ಬಿತ್ತನೆ ಕಾರ್ಯವು ನಡೆಯುತ್ತದೆ. ಅದಕ್ಕಾಗಿ ಸದ್ಯ ಹೊಲಗಳನ್ನು ಹಸನು ಮಾಡಲಾಗಿದೆ. ಇನ್ನು ಕೆಲವು ವಾರದಲ್ಲಿ ಮುಂಗಾರು ಪೂರ್ವ ಬಿತ್ತನೆಯೂ ಚುರುಕುಗೊಳ್ಳಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.