ರಾಮನಗರ: ಈ ವರ್ಷ ಮಳೆಗಾಲದ ಆರಂಭದಲ್ಲಿಯೇ ಕೆರೆ–ಕಟ್ಟೆಗಳು ಭರ್ತಿ ಆಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಕಳೆದ ನವೆಂಬರ್ನಲ್ಲಿ ಆದ ಅತಿವೃಷ್ಟಿ ಹಾಗೂ ಈ ವರ್ಷ ಏಪ್ರಿಲ್–ಮೇನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಬ್ಬರಕ್ಕೆ ಕೆರೆ–ಹಳ್ಳಗಳಿಗೆ ಯಥೇಚ್ಚ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ಎಲ್ಲಿಯೂ ನೀರಿನ ಕೊರತೆ ಕಂಡು ಬಂದಿಲ್ಲ. ಇದರಿಂದ ಅಂತರ್ಜಲವೂ ವೃದ್ಧಿ ಆಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಿದೆ.
ಚೆಕ್ಡ್ಯಾಮ್ಗಳ ಅಭಿವೃದ್ಧಿ: ನರೇಗಾ ಯೋಜನೆ ಅಡಿ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಸಾವಿರಾರು ಚೆಕ್ಡ್ಯಾಮ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಬಹುತೇಕವು ಈಗ ಭರ್ತಿ ಹಂತದಲ್ಲಿ ಇವೆ. ಕೆಲವು ಕಡೆ ಈ ಮಿನಿ ಅಣೆಕಟ್ಟೆಗಳು ಭರ್ತಿಯಾಗಿ ನೀರು ಕೆಳಗೆ ಹರಿಯತೊಡಗಿದೆ. ಮಳೆಗಾಲದಲ್ಲಿ ಉಂಟಾಗುವ ದಿಡೀರ್ ಪ್ರವಾಹಕ್ಕೆ ತಡೆವೊಡ್ಡುವ ಜೊತೆಗೆ ಮಳೆ ನೀರು ಸಂಗ್ರಹಕ್ಕೂ ಇದರಿಂದ ಅನುಕೂಲ ಆಗಿದ್ದು, ಇದನ್ನೇ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳತೊಡಗಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ: ಈ ವರ್ಷ ಏಪ್ರಿಲ್–ಮೇನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜನವರಿ 1ರಿಂದ ಮೇ 31ರವರೆಗೆ 177 ಮಿ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 312 ಮಿ.ಮೀ. ಮಳೆಯಾಗಿದ್ದು, ಶೇ 76ರಷ್ಟು ಹೆಚ್ಚುವರಿ ವರ್ಷಧಾರೆ ಆಗಿದೆ. ಜೂನ್ನಲ್ಲಿ ಈವರೆಗೆ 65 ಮಿ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 141 ಮಿ.ಮೀ. ಮಳೆ ದಾಖಲಾಗಿದ್ದು, ಶೇ 117ರಷ್ಟು ಹೆಚ್ಚುವರಿ ವರ್ಷಧಾರೆ ಆಗಿದೆ. ಮಾಗಡಿಯಲ್ಲಿ ಈ ತಿಂಗಳು ಒಂದರಲ್ಲಿಯೇ 180 ಮಿ.ಮೀ. ಮಳೆ ಬಿದ್ದಿದೆ. ಜುಲೈ ಹಾಗೂ ಆಗಸ್ಟ್ನಲ್ಲಿ ಹೆಚ್ಚಿನ ಮಳೆಯ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.