ಹಾರೋಹಳ್ಳಿ: ಹಳೆ ದ್ವೇಷ ಮತ್ತು ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಕಗ್ಗಲೀಪುರ ಪೊಲೀಸರು 24 ತಾಸಿನಲ್ಲಿ ಬಂಧಿಸಿದ್ದಾರೆ.
ಹಣಕ್ಕಾಗಿ ನರಸಿಂಹ ರೆಡ್ಡಿ ಎಂಬಾತ ತಮ್ಮ ಪತಿ ಕೆರೆ ಚೂಡಹಳ್ಳಿ ಗ್ರಾಮದ ರಾಜಶೇಖರ್ ಅವರನ್ನು ಅಪಹರಿಸಿದ್ದಾನೆ ಎಂದು ಅಪಹೃತರ ಪತ್ನಿ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು 24 ತಾಸಿನೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೊಸಕೆರೆಹಳ್ಳಿಯ ನರಸಿಂಹ ರೆಡ್ಡಿ, ವಜ್ರ ಅಲಿಯಾಸ್ ಮೂಗಿ, ಕೋರಮಂಗಲದ ಮನೋಹರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಗುಡಿಪಾಳ್ಯದ ಶಶಿ ಅಲಿಯಾಸ್ ಗಾಗ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು, ಚಾಕು, ಚ್ಚು, ಮಾಸ್ಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ರಾಜಶೇಖರ್ ಅವರನ್ನು ಹೆದರಿಸಿ ಎಟಿಎಂ ಪಾಸ್ವರ್ಡ್ ಪಡೆದು ಡ್ರಾ ಮಾಡಿದ್ದ ₹1ಲಕ್ಷದ ಪೈಕಿ ₹39 ಸಾವಿರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಗ್ಗಲೀಪುರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ವೆಂಕಟೇಶ್, ಪಿಎಸ್ಐ ಲೋಕೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.