ಹಾರೋಹಳ್ಳಿ: ಬೇಸಿಗೆ ಸಮಯದಲ್ಲಿ ನೀರಿಗೆ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಹಾರೋಹಳ್ಳಿಯ ಚಿಕ್ಕದೇವರಹಳ್ಳಿಯಲ್ಲಿ ಬೇಸಿಗೆಗೂ ಮುನ್ನವೇ ನೀರಿಗೆ ಸಮಸ್ಯೆ ಎದುರಾಗಿದ್ದು, ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾರೋಹಳ್ಳಿಯ ಟಿ.ಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕದೇವರಹಳ್ಳಿ ಗ್ರಾಮದಲ್ಲಿ ನೀರಿಗಾಗಿ ಕೊರೆಸಿರುವ ಬೋರ್ವೆಲ್ನಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ನೀರಿಗೆ ಹಾಹಾಕಾರ ಆರಂಭವಾಗಿದೆ.
ಗ್ರಾಮದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿದ್ದರೂ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಅದರಿಂದ ನೀರು ಸರಬರಾಜು ಮಾಡಬೇಕೆಂಬ ಕನಿಷ್ಠ ನಿರ್ಧಾರವನ್ನು ಅಲ್ಲಿನ ಆಡಳಿತ ಮಾಡಿಲ್ಲ.
ಗ್ರಾಮದಲ್ಲಿ ಜಾನುವಾರುಗಳ ನೀರಿಗಾಗಿ ಎರಡು ಸಿಸ್ಟರ್ನ್ ನಿರ್ಮಿಸಿದ್ದು, ಅದಕ್ಕೆ ನೀರು ಏರುತ್ತಿಲ್ಲ. ಹಾಗಾಗಿ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲವಾಗಿದೆ. ಜತೆಗೆ ತೊಟ್ಟಿ ಸುತ್ತಲೂ ಗಿಡಗಂಟಿ ಬೆಳೆದಿದ್ದು ಅದನ್ನು ಕತ್ತರಿಸುವ ಮನಸ್ಸು ಸ್ಥಳೀಯ ಆಡಳಿತ ಮಾಡಿಲ್ಲ.
ಗ್ರಾಮದಲ್ಲಿ ನೀರಿಗೆ ಸಮಸ್ಯೆ ಎದುರಾಗಿದ್ದು ಜನ ಜಾನುವಾರುಗಳು ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.ಶ್ವೇತಾ ಚಿಕ್ಕದೇವರಹಳ್ಳಿ ಗ್ರಾಮಸ್ಥೆ
ಸಾರ್ವಜನಿಕರಿಗೆ ತೊಂದರೆ ಆಗದ್ದಂತೆ ಪರ್ಯಾಯ ವ್ಯವಸ್ಥೆ ಮಾಡಿ ಖಾಸಗಿ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುವುದುಶಿವ ಪ್ರಸಾದ್.ಟಿ ಹೊಸಹಳ್ಳಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.