
ಕನಕಪುರ: ಹಿಂದೂ ಹೆಣ್ಣು ಮಕ್ಕಳನ್ನು ನಂಬಿಸಿ ವಂಚಿಸಿರುವ, ಕಗ್ಗೊಲೆ ಮಾಡಿರುವ ಪ್ರಕರಣಗಳು ನಡೆದಿವೆ. ಆ ರೀತಿ ಆಗದಂತೆ ತಡೆಗಟ್ಟಲು ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಅಂತರ್ಧರ್ಮೀಯ ವಿವಾಹಗಳ ನೊಂದಣಿಯನ್ನು ನೋಟಿಸ್ ಬೋರ್ಡ್ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಅರ್ಜುನ್ಗೌಡ ಒತ್ತಾಯಿಸಿದರು.
ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಅಂತರ್ಧರ್ಮೀಯ ವಿವಾಹಗಳ ಮಾಹಿತಿಯನ್ನು ನಾಮಫಲಕದಲ್ಲಿ ಹಾಕುವಂತೆ ಒತ್ತಾಯಿಸಿ ಉಪ ನೊಂದಾಣಾಧಿಕಾರಿ ಎ.ಸುರೇಶ್ಗೆ ಮನವಿ ಸಲ್ಲಿಸಿ ಮಾತನಾಡಿದರು.
ರಾಜ್ಯದ ವಿವಾಹ ನೊಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲಿಸದೆ, ನೋಟಿಸ್ ಬೋರ್ಡ್ಗೆ ದಾಖಲಾತಿಗಳನ್ನು ಹಾಕದೇ ವಿವಾಹ ಮಾಡುವ ಬಗ್ಗೆ ದೂರು ಕೇಳಿ ಬಂದಿದೆ ಎಂದರು.
ವಿವಾಹ ನೊಂದಣಿ ಸಂದರ್ಭದಲ್ಲಿ ವಿವಾಹವಾಗುವ ಅಂತರ ಧರ್ಮದವರ ಮಾಹಿತಿಯನ್ನು ನೋಟಿಸ್ ಬೋರ್ಡ್ಗೆ ಹಾಕಿ ಗಡುವಿನ ಸಮಯದವರೆಗೆ ಕಾದು ನಂತರದಲ್ಲಿ ಆಕ್ಷೇಪಣೆ ಬಾರದಿದ್ದಾಗ ನೊಂದಣಿ ನಡೆಸಿಕೊಡಬೇಕೆಂದು ಹೇಳಿದರು.
ಸೇನೆಯ ಜಿಲ್ಲಾ ಕಾರ್ಯದರ್ಶಿ ನವೀನ್.ಕೆ.ಎನ್, ತಾಲ್ಲೂಕು ಅಧ್ಯಕ್ಷ ರಾಜಗೋಪಾಲ್, ಉಪಾಧ್ಯಕ್ಷ ಮಹೇಶ್ ಗೌಡ, ಜಿಲ್ಲಾ ಸಹಕಾರ್ಯದರ್ಶಿ ಅರುಣ ಉದಾರಹಳ್ಳಿ, ಪವನ್ ಕುಮಾರ್, ಮೋಹನ್ ಕುಮಾರ್.ಕೆ.ವಿ ಹಾಜರಿದ್ದರು.
ಅಂತರ ಧರ್ಮ ವಿವಾಹ ನೊಂದಣಿ ಕಾಯ್ದೆಯಡಿ ವಿವಾಹ ಆಗಲು ಇಚ್ಚಿಸುವವರು ಮೊದಲಿಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಬೇಕು. ಅವರು ಕೊಟ್ಟಿರುವ ಮಾಹಿತಿ, ದಾಖಲೆಗಳನ್ನು ನೋಟಿಸ್ ಬೋರ್ಡ್ನಲ್ಲಿ ಪ್ರಕಟ ಮಾಡಲಾಗುವುದು. 30 ದಿನಗಳ ಗಡುವಿನೊಳಗೆ ಆಕ್ಷೇಪಣೆ ಬರದಿದ್ದರೆ ವಿವಾಹ ನೊಂದಣಿ ಅಡಿಯಲ್ಲಿ ವಿವಾಹ ಆಗಬದುಕು. ಆಕ್ಷೇಪಣೆ ಬಂದರೆ ರದ್ದು ಮಾಡಲಾಗುವುದು ಎಂದು ಉಪ ನೊಂದಣಾಧಿಕಾರಿ ಎ.ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.