ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಆಹಾರ ಅರಸಿ ಬಂದ ಚಿರತೆಯೊಂದು ಮನೆಯೊಳಗೆ ಬಂಧಿಯಾಗಿದ್ದು, ಅರಿವಳಿಕೆ ಮದ್ದು ನೀಡಿ ಅದನ್ನು ಸ್ಥಳಾಂತರಿಸಲಾಯಿತು.
ರಾತ್ರಿ 9.30ರ ಆಸುಪಾಸಿನಲ್ಲಿ ಗ್ರಾಮದ ಚಿಕ್ಕರಾಜು ಎಂಬುವವರ ಮನೆಗೆ ಸುಮಾರು ಎರಡು ವರ್ಷ ಪ್ರಾಯದ ಚಿರತೆಯು ಪ್ರವೇಶಿಸಿದ್ದು, ಕೊಟ್ಟಿಯಲ್ಲಿ ಕಟ್ಟಿಹಾಕಿದ್ದ ಕುರಿಯನ್ನು ಹಿಡಿಯಲು ನುಗ್ಗಿತು. ಮನೆಯ ಪಡಸಾಲೆಯಲ್ಲಿ ಮಲಗಿದ್ದವರು ಶಬ್ದ ಕೇಳಿ ಎಚ್ಚೆತ್ತಿದ್ದು, ಕೂಡಲೇ ಕೊಟ್ಟಿಗೆಯ ಬಾಗಿಲು ಹಾಕಿದ್ದರಿಂದ ಚಿರತೆಯು ಅಲ್ಲೇ ಬಂಧಿಯಾಯಿತು.
ವಿಷಯ ತಿಳಿದು ಡಿಸಿಎಫ್ ಎಸ್.ಎನ್. ಹೆಗಡೆ, ಎಸಿಎಫ್ ಕೃಷ್ಣಪ್ಪ, ಆರ್ಎಫ್ಒಗಳಾದ ದಾಳೇಶ್ ಹಾಗೂ ಮಹಮ್ಮದ್ ಮನ್ಸೂರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮನೆಯೊಳಗಿನ ಚಿರತೆಯನ್ನು ಹಿಡಿಯುವುದು ಅಸಾಧ್ಯವಾದ ಕಾರಣ ಅರಿವಳಿಕೆ ತಜ್ಞರನ್ನು ಕರೆಯಿಸಲಾಯಿತು. ಮಧ್ಯರಾತ್ರಿ 12.30ರ ಸುಮಾರಿಗೆ ಬನ್ನೇರುಘಟ್ಟ ವನ್ಯಜೀವಿ ಧಾಮದ ಅರವಳಿಕೆ ತಜ್ಞ ಡಾ. ಉಮಾಶಂಕರ್ ಮತ್ತವರ ತಂಡವು ಬಂದಿದ್ದು, ಕಿಟಕಿ ಮೂಲಕ ಚಿರತೆಗೆ ಅರವಳಿಕೆ ಇಂಜೆಕ್ಷನ್ ನೀಡಿದರು. ನಿತ್ರಾಣಗೊಂಡ ಚಿರತೆಯನ್ನು ಕೂಡಲೇ ಬೋನಿಗೆ ಸ್ಥಳಾಂತರಿಸಿದ್ದು, ಸೂಕ್ತ ಉಪಚಾರದ ಬಳಿಕ ಅದನ್ನು ಕಾಡಿಗೆ ಬಿಡಲಾಯಿತು.
ಸತತ ಮೂರು ಗಂಟೆ ಕಾಲ ಈ ಕಾರ್ಯಾಚರಣೆ ನಡೆದಿದ್ದು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದರು. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾದ ಮಧುಕುಮಾರ್, ವೆಂಕಟಸ್ವಾಮಿ ಕುಮಾರ್, ಮೋಹನ್ ಹೆಗಡೆ, ದಿಲೀಪ್ ಕುಮಾರ್, ರಾಮನಗರ ರಾಜು, ಶ್ರೀನಿವಾಸ್, ರವಿ, ನಾರಾಯಣ್ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.