ADVERTISEMENT

ಉದ್ಯಮಗಳಿಗೆ ಮರು ಚಾಲನೆ ನೀಡಿ: ಸಚಿವ ಜಗದೀಶ್ ಶೆಟ್ಟರ್ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 2:38 IST
Last Updated 9 ಆಗಸ್ಟ್ 2020, 2:38 IST
ಹಿಂದೂಸ್ತಾನ್ ಕೋಕಾ ಕೋಲಾ ಬೀವರೇಜಸ್- ಘಟಕಕ್ಕೆ ಸಚಿವ ಜಗದೀಶ್‌ ಶೆಟ್ಟರ್  ಚಾಲನೆ ನೀಡಿದರು. ಶಾಸಕ ಮಂಜುನಾಥ್‌ ಇದ್ದರು 
ಹಿಂದೂಸ್ತಾನ್ ಕೋಕಾ ಕೋಲಾ ಬೀವರೇಜಸ್- ಘಟಕಕ್ಕೆ ಸಚಿವ ಜಗದೀಶ್‌ ಶೆಟ್ಟರ್  ಚಾಲನೆ ನೀಡಿದರು. ಶಾಸಕ ಮಂಜುನಾಥ್‌ ಇದ್ದರು    

ಬಿಡದಿ: ಕೈಗಾರಿಕಾ ಪ್ರದೇಶದಲ್ಲಿರುವ ಹಿಂದೂಸ್ತಾನ್ ಕೋಕಾ ಕೋಲಾ ಬೀವರೇಜಸ್- ಎಚ್ ಸಿಸಿಬಿಯು ಹೊಸದಾಗಿ ತೆರೆದಿರುವ ಸ್ವ೦ಯಂ ಚಾಲಿತ ಉತ್ಪಾದನಾ ಘಟಕಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಯಂಚಾಲಿತ ಉತ್ಪಾದನಾ ಘಟಕದ ಸ್ಥಾಪನೆ ಸ್ವಾಗತಾರ್ಹವಾಗಿದ್ದು, ಉದ್ಯಮಗಳು ಮರು ಚಾಲನೆಗೆ ಸಿದ್ಧವಾಗಿವೆ ಎಂಬುದನ್ನು ಸೂಚಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಕೂಡ ಕೊರೊನಾ ಸಂಕಷ್ಟದ ಸಮಯದಲ್ಲಿ ಆರ್ಥಿಕ ಚಟುವಟಿಕೆ ಪ್ರೇರೇಪಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಮಿಕರು ಹಾಗೂ ಆಡಳಿತ ಮಂಡಳಿ ಅಂತರ ಕಾಯ್ದುಕೊಂಡು ಸರ್ಕಾರ ರೂಪಿಸಿರುವ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ADVERTISEMENT

ಎಚ್ ಸಿಸಿಬಿ ಮಾರುಕಟ್ಟೆ ಕಾರ್ಯಾಚರಣೆ ಕಾರ್ಯಕಾರಿ ನಿರ್ದೇಶಕ ದಿನೇಶ್ ಜಾಧವ್ ಮಾತನಾಡಿ,
ದೇಶದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾದ ಹಿಂದೂಸ್ತಾನ್ ಕೋಕಾ ಕೋಲಾ ಬೀವರೇಜಸ್- ಎಚ್ ಸಿಸಿಬಿಯು ಮಲ್ಟಿಪ್ಯಾಕ್ ಟೆಟ್ರಾ ಉತ್ಪಾದನಾ ಘಟಕ ಪರಿಚಯಿಸುವ ಮೂಲಕ ಇತರೆ ಕಾರ್ಖಾನೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದರು.

ಕೈಗಾರಿಕಾ ಸಚಿವರ ಉಪಸ್ಥಿತಿ ಉದ್ಯೋಗಿಗಳಿಗೆ ಮತ್ತು ಸ್ಥಳೀಯ ಸಮುದಾಯಕ್ಕೆ ಒಂದು ಉತ್ತಮ ಸಂದೇಶವಾಗಿದೆ. ಕೊರೊನಾ ಸಂಕಟದ ಸಮಯದಲ್ಲಿ ವೈಯಕ್ತಿಕ ಮತ್ತು ಸಮುದಾಯದ ಸುರಕ್ಷತೆ ಬಹಳ ಅವಶ್ಯ ಎಂದರು.

ಸರಬರಾಜು ಸರಪಳಿ ಕಾರ್ಯಕಾರಿ ನಿರ್ದೇಶಕ ಅಲೋಕ್ ಶರ್ಮಾ ಮಾತನಾಡಿ, ಸರ್ಕಾರ ಹೊಸತನಕ್ಕೆ ಉತ್ತೇಜನ ನೀಡುತ್ತದೆ ಎಂಬುದಕ್ಕೆ ಈ ಹೊಸ ಟೆಟ್ರಾ ಘಟಕ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಎ. ಮಂಜುನಾಥ್‌, ದಕ್ಷಿಣ ಸಮೂಹದ ಸರಬರಾಜು ಸರಪಳಿ ಉಪಾಧ್ಯಕ್ಷ ಮೋಹನ್ ಸಿಂಘ, ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ವಿಭಾಗದ ಸಹಾಯಕ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಖಾನೆ ವ್ಯವಸ್ಥಾಪಕ ಭೀಮಣ್ಣಪ್ಪ ಮಂತಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.