ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ತಗ್ಗಿದ ಅಪಘಾತಗಳು

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ; ಫಲಕೊಟ್ಟ ಪೊಲೀಸ್ ಕಾರ್ಯಾಚರಣೆ

ಓದೇಶ ಸಕಲೇಶಪುರ
Published 25 ಜುಲೈ 2023, 5:05 IST
Last Updated 25 ಜುಲೈ 2023, 5:05 IST
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ   

ರಾಮನಗರ: ಅಪಘಾತಗಳಿಂದಾಗಿ ದೇಶದ ಗಮನ ಸೆಳೆದಿದ್ದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಅಪಘಾತಗಳ ಸಂಖ್ಯೆ ಕೊಂಚ ಕಡಿಮೆಯಾಗಿದ್ದು, ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ.

ಜುಲೈ ತಿಂಗಳಲ್ಲಿ 27 ಅಪಘಾತಗಳು ಸಂಭವಿಸಿವೆ. ಈ ಪೈಕಿ, 3 ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನುಳಿದ 24 ಅಪಘಾತಗಳಲ್ಲಿ 30 ಮಂದಿ ಗಾಯಗೊಂಡಿದ್ದಾರೆ.

ಕಳೆದ ಆರು ತಿಂಗಳಲ್ಲಿ ಸಂಭವಿಸಿರುವ ಅಪಘಾತಗಳಿಗೆ ಹೋಲಿಸಿದರೆ, ಒಂದು ತಿಂಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಅಪಘಾತ ಮತ್ತು ಸಾವು–ನೋವು ವರದಿಯಾಗಿದೆ. ಎರಡಂಕಿಯಲ್ಲಿರುತ್ತಿದ್ದ ಸಾವಿನ ಪ್ರಕರಣ ಒಂದಂಕಿಗೆ ಇಳಿದಿರುವುದು ಸಮಾಧಾನ ತಂದಿದೆ.

ADVERTISEMENT

ಫಲ ಕೊಟ್ಟ ಕಾರ್ಯಾಚರಣೆ: ‘ಅಪಘಾತದ ಪ್ರಮುಖ ಸ್ಥಳಗಳು, ಹೆದ್ದಾರಿ ಪ್ರವೇಶ–ನಿರ್ಗಮನ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದೆವು. ಅತಿ ವೇಗ, ಪಥಶಿಸ್ತು ಉಲ್ಲಂಘನೆ, ಮದ್ಯ ಸೇವಿಸಿ ವಾಹನ ಚಾಲನೆ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಾಗಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡದ ಬಿಸಿ ಮುಟ್ಟಿಸಿದೆವು’ ಎಂದು ಸಂಚಾರ ಪೊಲೀಸರು ತಿಳಿಸಿದರು.

‘ಸ್ಪೀಡ್ ರಾಡಾರ್ ಮೂಲಕ ಅತಿ ವೇಗವಾಗಿ ಸಂಚರಿಸುವ ವಾಹನಗಳ ಮೇಲೆ ನಿತ್ಯ ನಿಗಾ ಇಡಲಾಗುತ್ತಿದೆ. 4 ಗಸ್ತು ವಾಹನಗಳು ಹೆದ್ದಾರಿಯುದ್ದಕ್ಕೂ ಸಂಚರಿಸುತ್ತಿವೆ. ಅನಗತ್ಯವಾಗಿ ವಾಹನಗಳು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಹೆದ್ದಾರಿಯಲ್ಲಿ ಪೊಲೀಸರ ಕಾರ್ಯಾಚರಣೆ ಹೆಚ್ಚಿದಂತೆ, ಸಂಚಾರ ನಿಯಮ ಉಲ್ಲಂಘನೆಗೂ ಕಡಿವಾಣ ಬೀಳತೊಡಗಿತು. ಕ್ರಮೇಣ ಅಪಘಾತಗಳ ಸಂಖ್ಯೆಯೂ ಇಳಿಕೆಯಾಯಿತು’ ಎಂದು ಹೇಳಿದರು.

158 ಜನ ಸತ್ತಿದ್ದರು:  ಕಳೆದ ಸೆಪ್ಟೆಂಬರ್‌ನಿಂದ ಹೆದ್ದಾರಿ ವಾಹನಗಳ ಸಂಚಾರಕ್ಕೆ ಮುಕ್ತವಾದ ಬಳಿಕ ಸುಮಾರು 595 ಅಪಘಾತಗಳು ಸಂಭವಿಸಿದ್ದವು. 158ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡು, 538 ಜನ ಗಾಯಗೊಂಡಿದ್ದರು. ಈ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಗಮನ ಸೆಳೆದಿತ್ತು.

ಮಿತಿ ಮೀರಿದ ಅಪಘಾತಗಳಿಂದಾಗಿ ‘ಸಾವಿನ ಹೆದ್ದಾರಿ’ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಹೆದ್ದಾರಿಯ ಸುರಕ್ಷತೆ, ಕಾಮಗಾರಿಯ ಗುಣಮಟ್ಟ ಹಾಗೂ ಅಪಘಾತ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಅಧಿವೇಶನದಲ್ಲೂ ಈ ವಿಷಯ ಪ್ರತಿಧ್ವನಿಸಿತ್ತು.

ವರದಿ ಕೊಟ್ಟಿದ್ದ ಎಸ್‌ಪಿ: ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ಸಂಭವಿಸುವ ಸ್ಥಳಗಳು, ಕಾರಣವಾಗಿರುವ ಅಂಶಗಳು ಹಾಗೂ ಅದಕ್ಕೆ ಕೈಗೊಳ್ಳಬೇಕಾದ ಅಂಶಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿಯೊಂದನ್ನು ಕೊಟ್ಟಿದ್ದರು.

ಕಾರ್ತಿಕ್ ರೆಡ್ಡಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ

ಅಂಕಿಅಂಶ... ಕಳೆದ 2 ತಿಂಗಳ ಪೊಲೀಸ್ ಕಾರ್ಯಾಚರಣೆ 312 ಮದ್ಯ ಸೇವಿನ ವಾಹನ ಚಾಲನೆ ಪ್ರಕರಣ ₹28 ಲಕ್ಷಮದ್ಯ ಸೇವನೆ ಪ್ರಕರಣದಲ್ಲಿ ದಂಡ 1,011ಅತಿ ವೇಗ ಪ್ರಕರಣ ₹9.89 ಲಕ್ಷ ಅತಿ ವೇಗಕ್ಕೆ ದಂಡ 4,900 ಹೆಲ್ಮೆಟ್ ರಹಿತ ಚಾಲನೆ ಪ್ರಕರಣ ₹25 ಲಕ್ಷ ಹೆಲ್ಮೆಟ್ ರಹಿತ ಪ್ರಕರಣದಲ್ಲಿ ದಂಡ 1,422ಪಥ ಶಿಸ್ತು ಉಲ್ಲಂಘನೆ ಪ್ರಕರಣ ₹6.90 ಲಕ್ಷ ಪಥ ಶಿಸ್ತು ಉಲ್ಲಂಘನೆಗೆ ದಂಡ 2,231 ಸೀಟ್ ಬೆಲ್ಟ್ ಧರಿಸದ ಪ್ರಕರಣ ₹11.66 ಲಕ್ಷ ಸೀಟ್ ಬೆಲ್ ಉಲ್ಲಂಘನೆ ದಂಡ 43 ಚಾಲನೆ ಮಾಡುವಾಗ ಮೊಬೈಲ್ ಬಳಕೆ ಪ್ರಕರಣ ₹66 ಸಾವಿರ ಮೊಬೈಲ್ ಬಳಕೆಗೆ ದಂಡ

ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡ ಕ್ರಮಗಳಿಂದಾಗಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ
– ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ

ಕಳೆದ 7 ತಿಂಗಳ ಅಪಘಾತದ ವಿವರ

ತಿಂಗಳು; ಅಪಘಾತ; ಸಾವು; ಗಾಯ

ಜನವರಿ; 49; 13 ;47

ಫೆಬ್ರುವರಿ; 32 ;11 ;31

ಮಾರ್ಚ್‌; 48; 11; 44

ಏಪ್ರಿಲ್; 47; 16; 61

ಮೇ; 58; 21; 46

ಜೂನ್; 37; 15; 47

ಜುಲೈ; 27 ; 3; 30

ಹೆದ್ದಾರಿ ಪರಿಶೀಲಿಸಿದ್ದ ಎಡಿಜಿಪಿ ತಜ್ಞರು ಪತ್ರಿಕಾ ವರದಿ ಪ್ರಕಟವಾದ ನಾಲ್ಕೇ ದಿನಕ್ಕೆ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮೂರು ಜಿಲ್ಲೆಗಳಲ್ಲಿ ಚಾಚಿಕೊಂಡಿರುವ 118 ಕಿ.ಮೀ. ಉದ್ದದ ಹೆದ್ದಾರಿಯನ್ನು ಪರಿಶೀಲನೆ ನಡೆಸಿದ್ದರು. ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಕಟ್ಟನಿಟ್ಟಾಗಿ ಸೂಚನೆ ನೀಡಿದ್ದರು. ಜೊತೆಗೆ ಎಕ್ಸ್‌ಪ್ರೆಸ್ ವೇ ಸುರಕ್ಷತೆ ಮತ್ತು ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೂವರ ಸಮಿತಿಯನ್ನು ನೇಮಿಸಿತ್ತು. ಸಮಿತಿ ಸದಸ್ಯರು ಇತ್ತೀಚೆಗೆ ಅಪಘಾತದ ಸ್ಥಳಗಳು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ಎಡಿಜಿಪಿ ಭೇಟಿ ಕಳೆದ ತಿಂಗಳು ಎಕ್ಸ್‌ಪ್ರೆಸ್ ವೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಎಡಿಜಿಪಿ ಅಲೋಕ್ ಕುಮಾರ್ ಅವರು ತಿಂಗಳ ಬಳಿಕ ಮತ್ತೆ ಮಂಗಳವಾರ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ. ತಮ್ಮ ಭೇಟಿ ಬಳಿಕ ಆಗಿರುವ ಬದಲಾವಣೆಗಳು ಪೊಲೀಸ್ ಕಾರ್ಯಾಚರಣೆ ಸೇರಿದಂತೆ ಇನ್ನಿತರ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.