ADVERTISEMENT

ಕನಕಪುರ: ಸ್ವಾತಂತ್ರ್ಯ ಸೇನಾನಿಗಳ ಸೇವೆ ಸ್ಮರಿಸಿ -ತಹಶೀಲ್ದಾರ್‌ ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 5:13 IST
Last Updated 3 ಅಕ್ಟೋಬರ್ 2021, 5:13 IST
ಕನಕಪುರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ಇಒ ಮಧು, ಬಿಇಒ ಜೆ.ಎಂ. ಜಯಲಕ್ಷ್ಮಿ, ಶಿವಕುಮಾರ್‌, ಶ್ರೀನಿವಾಸ್‌, ಪುಟ್ಟಮ್ಮ ಇದ್ದರು
ಕನಕಪುರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ಇಒ ಮಧು, ಬಿಇಒ ಜೆ.ಎಂ. ಜಯಲಕ್ಷ್ಮಿ, ಶಿವಕುಮಾರ್‌, ಶ್ರೀನಿವಾಸ್‌, ಪುಟ್ಟಮ್ಮ ಇದ್ದರು   

ಕನಕಪುರ: ‘ದೇಶ ಸಮೃದ್ಧವಾಗಿದೆ. ಜನರು ಸ್ವತಂತ್ರರಾಗಿ ಬದುಕುತ್ತಿದ್ದೇವೆ ಎಂದರೆ ಸ್ವಾತಂತ್ರ‍್ಯ ಸೇನಾನಿಗಳ ಹೋರಾಟವೇ ಕಾರಣ. ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡವರು ಹಿಂದೆ ಸರಿದಿದ್ದಾರೆ. ಮಹಾಚೇತನರನ್ನು ನಾವು ಮರೆಯುತ್ತಿದ್ದೇವೆ’ ಎಂದು ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ವಿಷಾದಿಸಿದರು.

ಇಲ್ಲಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

ಇಂದು ನಾವು ಸ್ವಾರ್ಥಕ್ಕಾಗಿ ಬದುಕುತ್ತಿದ್ದೇವೆ. ಸ್ವಾತಂತ್ರ‍್ಯ ಹೋರಾಟದ ಪ್ರತಿಯೊಬ್ಬ ಸೇನಾನಿಯು ದೇಶಕ್ಕಾಗಿ ಹೋರಾಡಿದ್ದಾರೆ. ಎಂದಿಗೂ ಅವರು ಸ್ವಾರ್ಥದ ಬಗ್ಗೆ ಯೋಚಿಸಿಯೇ ಇಲ್ಲ. ಬ್ರಿಟಿಷರ ವಿರುದ್ಧ ಎಲ್ಲಾ ಆಯಾಮಗಳಿಂದಲೂ ಹೋರಾಟ ನಡೆದಿತ್ತು. ಗಾಂಧೀಜಿ ಅವರು ತಮ್ಮ ಅಹಿಂಸೆ ಮತ್ತು ಶಾಂತಿಯ ಮೂಲಕ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರು ಎಂದರು.

ADVERTISEMENT

ಲಾಲ್‌ ಬಹದ್ದೂರ್‌ ಶಾಸ್ತ್ರಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಿ ಸ್ಥಾನವನ್ನು ಅಲಂಕರಿಸಿದರು. ಅವರ ಜೀವನವೇ ಒಂದು ತೆರೆದ ಪುಸ್ತಕ. ತಮ್ಮ ಜೀವನದಲ್ಲಿ ಎಂದಿಗೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲಿಲ್ಲ. ದೇಶದಲ್ಲಿ ಸ್ವಾವಲಂಬನೆಗೆ ಒತ್ತು ಕೊಟ್ಟು ಹಸಿರು ಕ್ರಾಂತಿಗೆ ನಾಂದಿ ಹಾಡಿದರು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ಮಾತನಾಡಿ, ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಎಲ್‌. ಮಧು ಮಾತನಾಡಿದರು. ಗ್ರೇಡ್‌– 2 ತಹಶೀಲ್ದಾರ್‌ ಶಿವಕುಮಾರ್‌, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ ಬಾಬು, ಶಿಕ್ಷಣ ಇಲಾಖೆಯ ಶ್ರೀನಿವಾಸ್‌, ಆಹಾರ ಇಲಾಖೆಯ ಪ್ರಕಾಶ್‌, ತಾಲ್ಲೂಕು ಕಚೇರಿ ಶಿರಸ್ತೇದಾರ್‌ ರಘು, ಪುಟ್ಟಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.