ADVERTISEMENT

ದೈಹಿಕ ಶಿಕ್ಷಣ ಉಪನ್ಯಾಸಕರ ಆಯ್ಕೆ ರದ್ದುಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:42 IST
Last Updated 22 ಸೆಪ್ಟೆಂಬರ್ 2021, 4:42 IST

ಕನಕಪುರ: ‘ಗ್ರಾಮಾಂತರ ವಿದ್ಯಾಪ್ರಚಾರಕ ಸಂಘ (ಆರ್‌ಇಎಸ್‌)ದ ಸಾತನೂರು ಪಿಯು ಕಾಲೇಜಿಗೆ ದೈಹಿಕ ಶಿಕ್ಷಣ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಕಾನೂನು ಬಾಹಿರ. ಈ ಆಯ್ಕೆ ಪ್ರಕ್ರಿಯೆಯನ್ನು ರದ್ದುಪಡಿಸಿ, ಮುಂದೆ ನಿಯಮಬದ್ಧವಾಗಿ ಆಯ್ಕೆಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‌ ಅವರು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ತಾಲ್ಲೂಕಿನ ಸಾತನೂರು ಗ್ರಾಮದಲ್ಲಿರುವ ಆರ್‌ಇಎಸ್‌ ಸಂಸ್ಥೆಯ ಪಿಯು ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆ ಖಾಲಿಯಿದ್ದು ಆ ಹುದ್ದೆಯನ್ನು ಭರ್ತಿ ಮಾಡಲು ಆರ್‌ಇಎಸ್‌ ಆಡಳಿತ ಮಂಡಳಿಯು ನಡೆಸಿರುವ ಆಯ್ಕೆ ಪ್ರಕ್ರಿಯೆ (ಇಂಟರ್‌ವ್ಯೂ) ನಿಯಮಬಾಹಿರವಾಗಿದೆ. ಆರ್‌ಇಎಸ್‌ ಆಡಳಿತ ಮಂಡಳಿಯ ಅಧಿಕಾರ ಅವಧಿಯೇ ಮುಕ್ತಾಯವಾಗಿದ್ದು, ಅವರಿಗೆ ಅಧಿಕಾರ ಚಲಾಯಿಸುವ ಹಕ್ಕಿಲ್ಲವೆಂದು ದೂರಿದ್ದಾರೆ.

ಯಾವುದೇ ಹುದ್ದೆಯನ್ನು ಭರ್ತಿ ಮಾಡುವ ಮುನ್ನ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸಾತನೂರು ಪಿಯು ಕಾಲೇಜಿನಲ್ಲಿ ಖಾಲಿ ಇರುವ ಪಿಇ ಉಪನ್ಯಾಸಕ ಹುದ್ದೆಗೆ ಅರ್ಹರಿಂದ ಅರ್ಜಿ ಪಡೆಯಲು ಒಂದೂವರೆ ವರ್ಷದ ಹಿಂದೆ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾರೆ. ಅದರ ಆಯ್ಕೆ ಪ್ರಕ್ರಿಯೆಯನ್ನು 2021ರ ಸೆ.18ರಂದು ಅವಧಿ ಮುಗಿದಿರುವ ಆರ್‌ಇಎಸ್‌ ಆಡಳಿತ ಮಂಡಳಿಯವರು ನಡೆಸಿದ್ದಾರೆ ಎಂದು ರವಿಕುಮಾರ್‌ ತಿಳಿಸಿದ್ದಾರೆ.

ADVERTISEMENT

‘ಆಡಳಿತ ಮಂಡಳಿಯವರು 2020 ಫೆ.20 ರಂದು ಪತ್ರಿಕಾ ಪ್ರಕಟಣೆ ನೀಡಿ ಕೋವಿಡ್‌ ಕಾರಣದಿಂದ ಮುಂದೂಡಿರುವುದಾಗಿ ಹೇಳಿ 2021 ಸೆ. 18 ರಂದು ಯಾವುದೆ ನೋಟಿಫಿಕೇಷನ್‌ ನೀಡದೆ ಏಕಾಏಕಿ ಕನಕಪುರ ವಿದ್ಯಾಸಂಸ್ಥೆಯಲ್ಲಿ ಆಡಳಿತ ಮಂಡಳಿಯು ಸಂದರ್ಶನ ನಡೆಸಿದ್ದಾರೆ. ತಮ್ಮ ಇಚ್ಛೆಗೆ ಅನುಗುಣವಾಗಿ ಪೂರ್ವ ನಿಯೋಜಿತವಾಗಿ ತಮಗೆ ಬೇಕಾದವರನ್ನು ಆಯ್ಕೆಮಾಡಿಕೊಳ್ಳಲು ತಂತ್ರವಾಗಿ ಕೆಲಸ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.