ADVERTISEMENT

ಹಾರೋಹಳ್ಳಿ: ಮಾರಕಾಸ್ತ್ರಗಳಿಂದ ಹೊಡೆದು ರೌಡಿ ಶೀಟರ್ ಸಂತೋಷ್ ಕೊಲೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 7:20 IST
Last Updated 3 ಮೇ 2025, 7:20 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಹಾರೋಹಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಮೂರ್ನಾಲ್ಕು ಮಂದಿಯ ಗುಂಪೊಂದು ರೌಡಿ ಶೀಟರ್ ಸಂತೋಷ್ ಅಲಿಯಾಸ್ ಸಂತು ಕರಡಿ (31) ಎಂಬಾತನನ್ನು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊ ಬಳಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದೆ.

ಕೊಲೆಯಾಗಿರುವ ಸಂತು ತಾಲ್ಲೂಕಿನ ಸಿದ್ದಾಪುರ ಗ್ರಾಮದವರು. ಹಲವು ವರ್ಷಗಳಿಂದ ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಲ್ಲಿ ವಾಸವಾಗಿದ್ದ ಆತ ರೌಡಿ ಶೀಟರ್ ಆಗಿದ್ದ. ಇತ್ತೀಚೆಗೆ ಗ್ರಾಮಕ್ಕೆ ಬಂದು ನೆಲೆಸಿದ್ದ.

ADVERTISEMENT

ಬೆಳಿಗ್ಗೆ 11ಗಂಟೆ ಸುಮಾರಿಗೆ ಸಂತು ಬೈಕ್ ನಲ್ಲಿ ಪಟ್ಟಣಕ್ಕೆ ಬಂದಿದ್ದ. ಡಿಪೊ ಬಳಿ ಹೋಗುತ್ತಿದ್ದ ಆತನನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಂದಿಯ ಗುಂಪು, ಬೈಕ್ ಗೆ ಕಾರಿನಿಂದ‌ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಆತನ ಮೇಲೆ ಲಾಂಗ್ ಮತ್ತು ಮಚ್ಚುಗಳಿಂದ ಹೊಡೆದು ಪರಾರಿಯಾಗಿದೆ ಎಂದು ಹಾರೋಹಳ್ಳಿ ಪೊಲೀಸರು ತಿಳಿಸಿದರು.

ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರವಾದ ಪೆಟ್ಟುಗಳು ಬಿದ್ದಿದ್ದರಿಂದ ಸಂತು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಬೆಂಗಳೂರಿನಲ್ಲಿದ್ದ ಸಂತು ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಹಾಗಾಗಿ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿಗಳ ಗುಂಪು ಕೃತ್ಯ ಎಸಗಿರುವ ಅನುಮಾನವಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.