ADVERTISEMENT

ರಾಮನಗರದ ಚಾಮುಂಡಿ ಕರಗದಲ್ಲಿ ಹಾಡಿದ್ದರು ಎಸ್‌ಪಿಬಿ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 15:15 IST
Last Updated 25 ಸೆಪ್ಟೆಂಬರ್ 2020, 15:15 IST
ಎಸ್‌.ಪಿ. ಬಾಲಸುಬ್ರಹ್ಮಣ್ಯಂ
ಎಸ್‌.ಪಿ. ಬಾಲಸುಬ್ರಹ್ಮಣ್ಯಂ   

ರಾಮನಗರ: ಗಾನಕೋಗಿಲೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ರೇಷ್ಮೆ ನಗರಿಯ ಜನರಿಗೂ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದರು. ಸಂಗೀತ ಕ್ಷೇತ್ರದ ಖ್ಯಾತ ಗಾಯಕ-ಗಾಯಕಿಯರೂ ಆ ಕ್ಷಣಗಳಿಗೆ ಸಾಕ್ಷಿ ಆಗಿದ್ದರು.

ಇಂತಹದ್ದೊಂದು ಅಭೂತಪೂರ್ವ ಕಾರ್ಯಕ್ರಮ ನಡೆದದ್ದು 2007ರಲ್ಲಿ. ರಾಮನಗರದಲ್ಲಿ ಕಳೆದ ಕೆಲವು ದಶಕಗಳಿಂದ ಚಾಮುಂಡಿ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾ ಬರಲಾಗಿದೆ. ಇದಕ್ಕೆಂದೇ ಪ್ರತ್ಯೇಕ ಸಮಿತಿ ಇದ್ದು, ಈ ಸಮಿತಿಯ ನೇತೃತ್ವದಲ್ಲಿ ಕರಗ ಮಹೋತ್ಸವದ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತೆಯೇ ಆ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಪಿಬಿ ನೇತೃತ್ವದ ತಂಡ ನೆರೆದ ಸಾವಿರಾರು ಶೋತೃಗಳಿಗೆ ಗಾಯನದ ರಸದೌತಣ ಉಣಬಡಿಸಿತ್ತು. ಹರಿಹರನ್‌. ಉಷಾ ಉತ್ತುಪ್ಪ, ಮಾಲ್ಗುಡಿ ಶುಭಾ ಮೊದಲಾದವರೂ ಎಸ್‌ಪಿಬಿ ಜೊತೆ ವೇದಿಕೆಯಲ್ಲಿ ಧ್ವನಿಗೂಡಿಸಿದ್ದರು. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಜಿಲ್ಲೆಯಲ್ಲಿ ಎಸ್‌ಪಿಬಿ ಪಾಲ್ಗೊಂಡ ಏಕೈಕ ಕಾರ್ಯಕ್ರಮ ಅದಾಗಿತ್ತು.

'ಅಂದಿನ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ಮೂಡಿಬಂದಿತ್ತು. ಬಾಲಸುಬ್ರಹ್ಮಣ್ಯಂ ಅವರ ಸಲಹೆ ಪಡೆದು ಅವರಿಗೆಂದೇ ವಿಶೇಷವಾಗಿ ವೇದಿಕೆಯನ್ನು ರೂಪಿಸಿದ್ದೆವು. ಆ ಕಾಲಕ್ಕೆ ಸುಮಾರು 65-70 ಲಕ್ಷ ರೂಪಾಯಿಹಣವನ್ನು ಇದಕ್ಕಾಗಿ ವ್ಯಯಿಸಿದ್ದೆವು. ಅಂದು ಅವರು ಸುಮಾರು ಎರಡು-ಮೂರು ಗಂಟೆ ಕಾಲ ವೇದಿಕೆಯಲ್ಲಿ ನಮ್ಮೆನ್ನೆಲ್ಲ ರಂಜಿಸಿದ್ದರು. ರಾತ್ರಿ 12ರವರೆಗೂ ಕಾರ್ಯಕ್ರಮ ನಡೆದಿತ್ತು. ನಿಜಕ್ಕೂ ಅದೊಂದು ಮರೆಯಲಾಗದ ಕ್ಷಣ’ ಎಂದು ಅಂದು ಕಾರ್ಯಕ್ರಮ ಆಯೋಜನೆಯ ಉಸ್ತುವಾರಿ ವಹಿಸಿದ್ದ ಕೆ. ಶೇಷಾದ್ರಿ (ಶಶಿ) ಮೆಲುಕು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.