ADVERTISEMENT

ಕುಂಭಾಭಿಷೇಕ, ವಿಶೇಷ ಅಲಂಕಾರ

ಕನ್ಯಕಾ ಪರಮೇಶ್ವರಿ ದೇವಾಲಯಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 2:52 IST
Last Updated 23 ಫೆಬ್ರುವರಿ 2021, 2:52 IST
ಕನ್ಯಕಾ ಪರಮೇಶ್ವರಿ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಇದ್ದರು
ಕನ್ಯಕಾ ಪರಮೇಶ್ವರಿ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಇದ್ದರು   

ರಾಮನಗರ: ನಗರದ ಎಂ.ಜಿ. ರಸ್ತೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಕುಂಭಾಭಿಷೇಕ ನೆರವೇರಿತು.

ಬೆಳಿಗ್ಗೆ ದೇವತಾ ಪ್ರಾಣಪ್ರತಿಷ್ಠಾಪನೆ, ಪ್ರತಿಷ್ಟಾಂಗ ಹೋಮ, ಕಲೋತ್ಸವ ಹೋಮ, ಮಹಾ ಪೂರ್ಣಾಹುತಿ, ಅಭಿಷೇಕ, ಕುಂಭಾಭಿಷೇಕ, ಅಲಂಕಾರ ಸೇವೆ ನೆರವೇರಿತು. ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಇದೇ ವೇಳೆ ಅರ್ಚಕರ ತಂಡ ದೇವತಾ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನೆರವೇರಿಸಿದರು. ಇಡೀ ದೇವಾಲಯಯನ್ನು ವಿಶೇಷವಾಗಿ ಸಿಂಗರಿಸಿದ್ದು, ಕುಂಭಾಭಿಷೇಕದ ಅಂಗವಾಗಿ ರಾಜಗೋಪುರಕ್ಕೆ ಪುಷ್ಪಾರ್ಚನೆ ಮಾಡಲು ಕ್ರೇನ್ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಅಲಂಕಾರ

ADVERTISEMENT

ದೇಗುಲದಲ್ಲಿನ ಕನ್ಯಕಾ ಪರಮೇಶ್ವರಿ, ನಗರೇಶ್ವರ ಸ್ವಾಮಿ, ಜನಾರ್ದನ ಸ್ವಾಮಿ, ಆಂಜನೇಯ ಸ್ವಾಮಿ, ಗಣೇಶ ಮೂರ್ತಿ, ನಾಗಪ್ಪ, ಚಂಡಿಕೇಶ್ವರ ಸ್ವಾಮಿ, ಜಲಕಂಠೇಶ್ವರ ಸ್ವಾಮಿ, ನವಗ್ರಹಗಳು, ದಕ್ಷಿಣಾ ಮೂರ್ತಿ, ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಗಳನ್ನು ಹೂಗಳಿಂದ ಸಿಂಗರಿಸಲಾಗಿತ್ತು. 40 ಅಡಿ ಎತ್ತರದ ರಾಜಗೋಪುರಕ್ಕೆ ನೂತನವಾಗಿ ಕಳಸ ಕೂರಿಸಲಾಯಿತು. ಗೋಪುರದ ಮೇಲಕ್ಕೆ ಸಾಗಲು ತಾತ್ಕಾಲಿಕ ಮೆಟ್ಟಿಲು ವ್ಯವಸ್ಥೆ ಮಾಡಲಾಗಿತ್ತು. ಕುಂಭಾಭಿಷೇಕದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.

ಡಿಸಿಎಂ ಭೇಟಿ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರುದ್ರದೇವರು, ಶಿವಮಾದು, ಪಿ. ಶಿವಾನಂದ, ಡಿ. ನರೇಂದ್ರ ಇದ್ದರು. ಋಷಿಕೇಷ ಅರ್ಷ ವಿದ್ಯಾಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ವಾಸವಿ ಮಹಿಳಾ ಮಂಡಳಿಯಿಂದ ಮಹಿಳೆಯರಿಗೆ ಮಡಿಲಕ್ಕಿ ತುಂಬಲಾಯಿತು. ದೇವಾಲಯದ ಜೀರ್ಣೋದ್ಧಾರಕ್ಕೆ ಸಹಕರಿಸಿದ ದಾನಿಗಳನ್ನು
ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.