ಚನ್ನಪಟ್ಟಣ: ತಾಲ್ಲೂಕಿನ ಬೇವೂರು ಗ್ರಾಮದ ಶ್ರೀ ತಿಮ್ಮಪ್ಪ ದೇವಸ್ಥಾನದಲ್ಲಿ ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆಯಿಂದಲೆ ದೇವಸ್ಥಾನದಲ್ಲಿ ದೇವರಿಗೆ ಪೂಜಾ ಕಾರ್ಯಕ್ರಮ ನಡೆದವು. ಗ್ರಾಮದ ಭಕ್ತರು ಹಾಗೂ ಅಕ್ಕಪಕ್ಕದ ಗ್ರಾಮಗಳ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ದೇವರ ಮೆರವಣಿಗೆ ನಡೆದವು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ತಹಶೀಲ್ದಾರ್ ಸುದರ್ಶನ್ ಮಾತನಾಡಿ, ‘ಬೇವೂರು ಗ್ರಾಮವು ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮವಾಗಿದ್ದು ಒಂದಾನೊಂದು ಕಾಲದಲ್ಲಿ ಈ ಗ್ರಾಮ ಜೈನರ ಪ್ರಮುಖ ಕೇಂದ್ರವಾಗಿತ್ತು ಎಂಬುದಕ್ಕೆ ಪುರಾವೆಗಳಿವೆ. ಈ ಗ್ರಾಮ ಸಿದ್ದರಾಮೇಶ್ವರ ಬೆಟ್ಟ ಮತ್ತು ತಿಮ್ಮಪ್ಪ ಬೆಟ್ಟದ ಮಧ್ಯ ಇದ್ದು, ಇದೊಂದು ಧಾರ್ಮಿಕ ಕೇಂದ್ರ’ ಎಂದರು.
ದೇವಸ್ಥಾನದ ಮೇಲ್ವಿಚಾರಕ ಬಿ.ಸಿ. ಪುಟ್ಟಸ್ವಾಮಿ, ಅರ್ಚಕ ವೆಂಕಟೇಶ್, ಗ್ರಾಮಸ್ಥರಾದ ರಾಜು, ರಾಘು, ಪುಟ್ಟಸ್ವಾಮಿ, ಕುಮಾರ್, ಚಿಕ್ಕಣ್ಣ, ನರಸಿಂಹಣ್ಣ ಭಾಗವಹಿಸಿದ್ದರು.
ವಿಶೇಷ ಪೂಜೆ: ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ ನಡೆದವು.
ತಾಲ್ಲೂಕಿನ ಸಂಜೀವರಾಯಸ್ವಾಮಿ ದೇವಸ್ಥಾನ, ಭೂಹಳ್ಳಿ ವೀರಾಂಜನೇಯಸ್ವಾಮಿ ದೇವಸ್ಥಾನ, ಎಲೇಕೇರಿ ಆಂಜನೇಯಸ್ವಾಮಿ ದೇವಸ್ಥಾನ, ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಮಂಗಳವಾರಪೇಟೆ ಕೋತಿ ಆಂಜನೇಯಸ್ವಾಮಿ ದೇವಸ್ಥಾನ, ಕೋಡಂಬಹಳ್ಳಿ ಹನುಮಂತ ದೇವಸ್ಥಾನ, ಹೊಂಗನೂರು ಹನುಮ ದೇವಸ್ಥಾನ ಸೇರಿದಂತೆ ತಾಲ್ಲೂಕು ಹಾಗೂ ಪಟ್ಟಣದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.