ADVERTISEMENT

ರಾಮದೇವರ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 13:11 IST
Last Updated 14 ಏಪ್ರಿಲ್ 2019, 13:11 IST
ಛತ್ರದ ಬೀದಿಯಲ್ಲಿ ಭಾನುವಾರ ಶ್ರೀರಾಮ ರಥೋತ್ಸವ ನಡೆಯಿತು
ಛತ್ರದ ಬೀದಿಯಲ್ಲಿ ಭಾನುವಾರ ಶ್ರೀರಾಮ ರಥೋತ್ಸವ ನಡೆಯಿತು   

ರಾಮನಗರ: ಪುರಾಣ ಪ್ರಸಿದ್ಧ ಕ್ಷೇತ್ರ ರಾಮದೇವರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮದೇವರ ಮಹಾ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಪುಷ್ಪಾಲಂಕಾರದಿಂದ ಶೋಭಿತನಾದ ಶ್ರೀರಾಮನ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಯಿತು. ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ಛತ್ರ ಬೀದಿಯಿಂದ ಆರಂಭವಾದ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಸ್ಥಾನಕ್ಕೆ ಮರಳಿತು.

ಭಕ್ತರು ರಥಕ್ಕೆ ಹಣ್ಣು-ಕಾಯಿ ಪೂಜೆ ಸಲ್ಲಿಸಿ, ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಬಾಳೆಹಣ್ಣನ್ನು ರಥಕ್ಕೆ ಎಸೆದು ಹರಕೆ ತಿರಿಸಿದರು. ಛತ್ರ ಬೀದಿಯ ಹಲವೆಡೆ ಯುವಕ ಸಂಘಗಳು ಮಜ್ಜಿಗೆ, ಬೆಲ್ಲದ ಪಾನಕ ಮತ್ತು ಪ್ರಸಾದ ವಿತರಣೆ ಮಾಡಿದರು.

ADVERTISEMENT

ರಾಮದೇವರ ಜಾತ್ರೋತ್ಸವದ ಅಂಗವಾಗಿ ಛತ್ರದ ಬೀದಿಯಲ್ಲಿ ಗೃಹಬಳಕೆ, ಆಟಿಕೆ ಸಾಮಗ್ರಿಗಳು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿದ್ದವು. ಚಿಕ್ಕ ಮಕ್ಕಳು ಆಟಿಕೆ ಸಾಮಗ್ರಿಗಳಿಗಾಗಿ ಪಾಲಕರನ್ನು ಪೀಡಿಸುತ್ತಿರುವುದು ಸಾಮಾನ್ಯವಾಗಿತ್ತು. ಉರಿ ಬಿಸಿಲಲ್ಲೂ ಭಕ್ತರು ದೇವರ ದರ್ಶನಕ್ಕೆ ಬಂದು, ಪಾನಕ ಮತ್ತು ಮಜ್ಜಿಗೆ ಸೇವಿಸುವ ಮೂಲಕ ದಣಿವಾರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.