ರಾಮನಗರ: ಸತ್ಯದ ದಾರಿಯಲ್ಲಿ ನಡೆದರೆ ಬದುಕಿನಲ್ಲಿ ಯಶಸ್ಸು, ಸಾರ್ಥಕತೆ ಕಾಣಬಹುದು ಎಂದು ಸತ್ಯ ಸಂಸತಿ ಸ್ಪಿರಿಚ್ಯುಯಲ್ ಟ್ರಸ್ಟ್ ಸಂಸ್ಥಾಪಕ ಪಂಡಿತ ಶ್ರೀನಿವಾಸ ಹೇಳಿದರು.
ನಗರದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ತಾಲ್ಲೂಕಿನ ವಿವಿಧ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಸತ್ಯ ಸಂಸತಿ ಸ್ಪಿರಿಚ್ಯುಯಲ್ ಟ್ರಸ್ಟ್ ವತಿಯಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ಸತ್ಯದ ದಾರಿಯಲ್ಲಿ ನಡೆದರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದಂತೆ. ಇದರ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಆದರೂ ಸಮಾಜಕ್ಕೆ ಏನಾದರೂ ಕೆಲಸ ಮಾಡುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಇಂದು ಸಮಾಜಕ್ಕೆ ಸತ್ಯವಂತರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಟ್ರಸ್ಟ್ ಅಧ್ಯಕ್ಷೆ ರಶ್ಮಿ ಮಾತನಾಡಿ, ಟ್ರಸ್ಟ್ ವತಿಯಿಂದ ಅನಾಥರು, ವೃದ್ಧರು, ವಿಶೇಷ ಚೇತನರಿಗೆ ₹500 ಮಾಶಾಸನವನ್ನು ನೀಡಲಾಗುತ್ತಿದೆ. ಕಳೆದ 6 ವರ್ಷಗಳಿಂದಲೂ ಸರ್ಕಾರಿ ಶಾಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತಿದ್ದು, 66 ಶಾಲೆಗಳಿಗೆ ಈವರೆಗೆ ವಿತರಿಸಲಾಗಿದೆ. ರಾಮನಗರ, ಮಾಗಡಿ, ಚನ್ನಪಟ್ಟಣ, ತುಮಕೂರಿನ ಕುಣಿಗಲ್ ತಾಲೂಕಿನ ಅಂಗನವಾಡಿಗಳು, ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 22 ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರಾ, ಟ್ರಸ್ಟ್ ಸದಸ್ಯರಾದ ಪದ್ಮಶ್ರೀ, ಸಂಜಯ್ ಜೈನ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗಣೇಶ್, ಮುಖ್ಯ ಶಿಕ್ಷಕ ಎಸ್. ಕೃಷ್ಣಪ್ಪ ಇದ್ದರು. ಎಬಿಸಿಡಿ ನೃತ್ಯ ಶಾಲೆ ಮಕ್ಕಳು ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಶಿಕ್ಷಕ ರಾಜಶೇಖರ್ ವಂದಿಸಿದರು, ವಿದ್ಯಾರ್ಥಿನಿಯರಾದ ವಂದನಾ, ಪ್ರಿಯಾಂಕ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.