ಕನಕಪುರ: ‘ದೇಶದಲ್ಲಿ ಇಂದು 10 ಕೋಟಿ ಕುಟುಂಬಗಳು ಹೈನುಗಾರಿಕೆಯಿಂದ ಉತ್ತಮ ಜೀವನ ನಡೆಸುತ್ತಿವೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಾಲಿನ ಡೇರಿ ಕಟ್ಟಡಕ್ಕೆ ₹ 1.5 ಲಕ್ಷ ಸಹಾಯಧನ ನೀಡಲಾಗುತ್ತಿದೆ’ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ತುಂಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಸಂದ್ರ ಗ್ರಾಮದಲ್ಲಿ ಹಾಲಿನ ಡೇರಿ ಕಟ್ಟಡಕ್ಕೆ ಚೆಕ್ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ರೈತರ ಜೀವನಾಡಿಯಾಗಿದೆ. ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲೂ ರೈತರ ಕೈ ಹಿಡಿದಿದೆ. ಪ್ರತಿಯೊಂದು ಕುಟುಂಬವೂ ಹೈನುಗಾರಿಕೆ ಮೂಲಕ ಆರ್ಥಿಕ ಸದೃಢತೆ ಸಾಧಿಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ದೇವಸ್ಥಾನ ಮತ್ತು ಹಾಲಿನ ಡೇರಿ ಕಟ್ಟಡದ ನಿರ್ಮಾಣ, ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಸ್ಥೆಯು ಉದಾರವಾಗಿ ಸಹಾಯ ಮಾಡುತ್ತಿದೆ. ಸಮಾಜ ನಮಗೇನು ಕೊಟ್ಟಿದೆ ಎಂದು ಚಿಂತಿಸುವುದನ್ನು ಬಿಟ್ಟು ಸಮಾಜದಿಂದ ಬೆಳೆದಿರುವ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಯೋಚಿಸಬೇಕು. ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು
ತಿಳಿಸಿದರು.
ಧರ್ಮಸ್ಥಳ ಸಂಸ್ಥೆಯ ಹಾರೋಹಳ್ಳಿ ತಾಲ್ಲೂಕು ನಿರ್ದೇಶಕಿ ನಾಗವೇಣಿ, ಕಸಬಾ ವಲಯ ಮೇಲ್ವಿಚಾರಕ ಮೋಹನ್, ಸೇವಾ ಪ್ರತಿನಿಧಿ ಸೌಮ್ಯಾ, ಗೋಪಸಂದ್ರ ಹಾಲಿನ ಡೇರಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ಗೌರಮ್ಮ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಉಮೇಶ್, ಸಂಘದ ನಿರ್ದೇಶಕರು, ರೈತರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.