ಮಾಗಡಿ: ತಾಲ್ಲೂಕಿನಲ್ಲಿ ಶನಿವಾರ 110 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸಪ್ರಸಾದ್ ತಿಳಿಸಿದರು.
ಕೋವಿಡ್ ಸೋಂಕು ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವವರನ್ನು ಶನಿವಾರ ಭೇಟಿ ಮಾಡಿ ಧೈರ್ಯ ತುಂಬಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ
ನೀಡಿದರು.
ಸಾರ್ವಜನಿಕರು ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಅಧಿಕಾರಿಗಳ ಜೊತೆಗೆ ಕೈಜೋಡಿಸಬೇಕು. ಲಾಕ್ಡೌನ್ ಮತ್ತು ನಿಷೇಧಾಜ್ಞಾ ಜಾರಿಯಲ್ಲಿದ್ದರೂ ಬೇಕಾಬಿಟ್ಟಿಯಾಗಿ ವಾಹನಗಳಲ್ಲಿ ಅಲೆದಾಡುವುದು, ಬೀದಿಬದಿ ತರಕಾರಿ ಮಾರಾಟ ಮಾಡುವುದು, ಅಂಗಡಿಮುಗ್ಗಟ್ಟುಗಳನ್ನು ಅವಧಿ ಮೀರಿದರೂ ಬಾಗಿಲು ಮುಚ್ಚದೆ ಇರುವುದು ಸರಿಯಲ್ಲ ಎಂದು ತಿಳಿಸಿದರು.
ಮಾಸ್ಕ್ ಧರಿಸದೆ ಅಲೆದಾಡುವುದು ಕಂಡುಬರುತ್ತಿದೆ. ಕೋವಿಡ್ ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕು. ಸಾರ್ವಜನಿಕರೆಲ್ಲರೂ ಕೋವಿಡ್ ಟೆಸ್ಟ್ ಮಾಡಿಸುವುದು ಸೂಕ್ತ. ಸೋಂಕು ದೃಢಪಟ್ಟ ಕೂಡಲೇ ಆತಂಕ ಪಡುವ ಅಗತ್ಯವಿಲ್ಲ.ಸೋಂಕಿನ ಬಗ್ಗೆ ಭೀತಿ ಬೇಡ. ಎಚ್ಚರಿಕೆ ಇರಬೇಕು ಎಂದರು.
ಪಟ್ಟಣ ಮತ್ತು ಕುದೂರು, ಸೋಲೂರುಗಳಿಗೆ ಭೇಟಿ ನೀಡಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಧೈರ್ಯ ತುಂಬಿದರು. ಆರ್ಬಿಎಸ್ಕೆಯ ಡಾ.ಜಗದೀಶ್ ಸೋಂಕಿತರಿಗೆ ಆರೋಗ್ಯ ಸುಧಾರಣೆ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕಿನ ವೀರೇಗೌಡನ ದೊಡ್ಡಿ ಕಾಲೊನಿಯಲ್ಲಿ ಇಬ್ಬರು, ಪಟ್ಟಣದ ಕಲ್ಯಾಬಾಗಿಲು ಬಳಿ ಒಬ್ಬರು ಸೇರಿದಂತೆ ಒಟ್ಟು ಮೂವರು ಕೋವಿಡ್ ಸೋಂಕಿಗೆ ಶನಿವಾರ ಬಲಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.