ADVERTISEMENT

ಕನಕಪುರ: ಗೋಡೆ ಮೇಲೆ ಚಿತ್ರ ಬಿಡಿಸಿದ ಶಿಕ್ಷಕರು

ಉಯ್ಯಲಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಸ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 4:14 IST
Last Updated 11 ಜುಲೈ 2021, 4:14 IST
ಕನಕಪುರ ತಾಲ್ಲೂಕಿನ ಉಯ್ಯಲಪ್ಪನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಗೋಡೆಬರಹ ಮಾಡುತ್ತಿರುವುದು
ಕನಕಪುರ ತಾಲ್ಲೂಕಿನ ಉಯ್ಯಲಪ್ಪನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಗೋಡೆಬರಹ ಮಾಡುತ್ತಿರುವುದು   

ಕನಕಪುರ: ಶಾಲೆಯಲ್ಲಿ ಮಕ್ಕಳ ಕಲಿಕೆಗಾಗಿ ತಾಲ್ಲೂಕಿನ ಶಿಕ್ಷಕರ ತಂಡ ಗೋಡೆ ಬರಹದ ಮೂಲಕ ಕನ್ನಡ, ಪರಿಸರ ವಿಜ್ಞಾನ, ಸಮಾಜ ಮತ್ತು ಗಣಿತಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ವರ್ಣರಂಜಿತವಾಗಿ ಬಿಡಿಸುವ ಕಾರ್ಯವನ್ನು ತಾಲ್ಲೂಕಿನ ಉಯ್ಯಲಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಮಾಡಿದೆ.

ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಉಯ್ಯಲಪ್ಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5 ನೇ ತರಗತಿಯಿದ್ದು ನಲಿ-ಕಲಿ ಕಾರ್ಯಕ್ರಮದಲ್ಲಿ ಮಕ್ಕಳು ನೋಡಿಯೇ ಕಲಿಯುವುದಕ್ಕೆ ಉಪಯುಕ್ತವಾಗುವಂತೆ ಗೋಡೆಬರಹ ಕಾರ್ಯಕ್ರಮವನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ನಡೆಸಿಕೊಟ್ಟಿತು.

ಸಂಘದ ತಾಲ್ಲೂಕು ಅಧ್ಯಕ್ಷ ನೇ.ರಾ. ಪ್ರಭಾಕರ್‌ ಮಾತನಾಡಿ, ಶಿಕ್ಷಕರ ಸಂಘ ಪ್ರತಿವರ್ಷ ಶಾಲಾ ವಾಸ್ತವ್ಯ ನಡೆಸಿ ಆ ಶಾಲೆಗೆ ಬೇಕಿರುವ ಎಲ್ಲಾ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವುದರ ಜತೆಗೆ ಶಾಲೆ ಬಣ್ಣ, ಆಟದ ಮೈದಾನ ಅಭಿವೃದ್ಧಿ, ಕಾಂಪೌಂಡ್‌ ನಿರ್ಮಾಣ ಮಾಡಿಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ADVERTISEMENT

ಕೊರೊನಾ ಸೋಂಕಿನಿಂದ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಶಾಲಾ ವಾಸ್ತವ್ಯಕ್ಕೆ ಅವಕಾಶವಾಗಲಿಲ್ಲ. ಹಾಗಾಗಿ ಉಯ್ಯಲಪ್ಪನಹಳ್ಳಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಗೋಡೆ ಬರಹ ಮಾಡುವ ಕೆಲಸ ಮಾಡಿದ್ದೇವೆ. ಒಂದೇ ಕೊಠಡಿ ಇದ್ದು ಶಾಲೆಯು ಉತ್ತಮ ಸ್ಥಿತಿಯಲ್ಲಿದ್ದರಿಂದ ಹೆಚ್ಚಿನದೇನು ಕೆಲಸವಿರಲಿಲ್ಲ. ಹಲವು ಶಿಕ್ಷಕರು ಸೇರಿ ಒಂದೇ ದಿನದಲ್ಲಿ ಗೋಡೆ ಬರಹ ಪೂರ್ಣ ಮಾಡಿದ್ದಾಗಿ ಹೇಳಿದರು.

ಕಲಾವಿದ ಕಾಳಯ್ಯ, ಶಾಲಾ ಮುಖ್ಯಶಿಕ್ಷಕ ಮಾರುತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಟರಾಜು, ಸಂಘಟನಾ ಕಾರ್ಯದರ್ಶಿ ಜಿ.ಎಸ್‌. ಗೀತಾ, ತಾಲ್ಲೂಕು ನಿರ್ದೇಶಕ ರಾದ ಎನ್‌.ಜಿ. ರಾಜು, ಧರ್ಮನಾಯ್ಕ್‌, ಎಚ್‌.ಆರ್‌. ನಾಗರಾಜು ಸೇರಿದಂತೆ 20 ಶಿಕ್ಷಕರು ಪಾಲ್ಗೊ೦ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.